ವಿಜಯಪುರ (ನ.2): ಭೀಮಾತೀರದಲ್ಲಿ ಮತ್ತೊಮ್ಮೆ ಗುಂಡಿನ ಮೊರೆತ ಕೇಳಿಸಿದೆ. ಹಲವು ದಶಕಗಳಿಂದ ಚಡಚಣ ಹಾಗೂ ಭೈರಗೊಂಡ ಎರಡು ಕುಟುಂಬಗಳ ನಡುವಿನ ವೈಷಮ್ಯ ಕೊನೆಗೊಂಡು ಭೀಮಾತೀರ ಶಾಂತವಾಗಿದೆ ಅಂದುಕೊಳ್ಳುವಾಗಲೇ ಮಹಾದೇವ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆದಿದೆ. ಮೂವರು ಅಪರಿಚಿತರಿಂದ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿದೆ.
ಮಹಾದೇವ ಭೈರಗೊಂಡ ಅವರ ಕಾರ್ ಗೆ ಟಿಪ್ಪರ್ ನಿಂದ ಢಿಕ್ಕಿ ಹೊಡೆಸಿದ ಅಪರಿಚಿತರು ನಂತರ ಫೈರಿಂಗ್ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಅರಕೇರಾ ತಾಂಡಾದ ಬಳಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡ ಅವರ ಸ್ಥಿತಿ ಗಂಭೀರವಾಗಿದ್ದು , ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿನಿಮಾ ಶೈಲಿಯಲ್ಲಿ ದಾಳಿ ನಡೆಸಿದ್ದು, ಮಹಾದೇವ ಭೈರಗೊಂಡನ ಸಹಚರ ಬಾಬುರಾಯ ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯಪುರದ ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು , ಗುಂಡಿನ ದಾಳಿ ನಡೆಸಿದ ಮೂವರು ಅಪರಿಚಿತರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಡಚಣ ಪೊಲೀಸರು ದಾಳಿ ನಡೆಸಿದವರಿಗಾಗಿ ಶೋಧ ಕೈಗೊಂಡಿದ್ದಾರೆ. ಅಂತೂ ಶಾಂತವಾಗಿದ್ದ ಭೀಮಾತೀರ ಮತ್ತೊಮ್ಮೆ ಸುದ್ದಿಯಲ್ಲಿ ಮುನ್ನೆಲೆಗೆ ಬಂದಂತಾಗಿದೆ.