ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ಭೇದಿಸುವುದೇ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿಗಿದೆ. ಶಂಕಿತ ವ್ಯಕ್ತಿ ಮಾಡಿರೋ ಪ್ಲಾನ್ ನಿಜಕ್ಕೂ ಶಾಕ್ ಆಗುವಂತಿದೆ. ತನ್ನ ಯಾವುದೇ ಹೆಜ್ಜೆ ಗುರುತು ಸಿಗದಂತೆ ನೀಟಾಗಿ ಪ್ಲಾನ್ ಮಾಡಿ, ಸ್ಫೋಟ ಮಾಡಿದ್ದಾನೆ. ಬಾಂಬ್ ಬ್ಲಾಸ್ಟ್ ಬಳಿಕ ಶಂಕಿತ ವ್ಯಕ್ತಿ ಬೆಂಗಳೂರು ತೊರೆದಿರುವ ಸಾಧ್ಯತೆ ಹೆಚ್ಚಿದೆ.
ಕುಂದನಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದು ಎರಡು ದಿನಗಳಾಯ್ತು. ಆದರೆ, ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆರೋಪಿಗಾಗಿ ಬೆಂಗಳೂರು ಪೊಲೀಸರು ಹಗಲು ರಾತ್ರಿ ಎನ್ನದೇ ಸಿಸಿಟಿವಿ ಫುಟೇಜ್ಗಳನ್ನು ಒಂದು ಕ್ಷಣವೂ ಬಿಡದಂತೆ ಜಾಲಾಡುತ್ತಿದ್ದಾರೆ. ಆದರೆ ಆತ ಸ್ಫೋಟಕ್ಕಾಗಿ ಮಾಡಿದ್ದ ಪ್ಲಾನ್ ಪೊಲೀಸರಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿದೆ.
ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ, ಬಸ್ನಲ್ಲಿ ಬಂದಿದ್ದ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಧೃಡವಾಗಿದೆ.
26 ಬಿಎಂಟಿಸಿ ಬಸ್ಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ ಅದರಲ್ಲಿ ಒಂದು ಬಸ್ನಲ್ಲಿ ಮಾತ್ರ ಆತನ ಗುರುತು ಸಿಕ್ಕಿದೆ. ಆದ್ರೆ, ಕ್ಯಾಪ್ ಹಾಕಿಕೊಂಡು ಮುಖ ಮರೆ ಮಾಚಿಕೊಂಡಿದ್ದಾನೆ. ಇನ್ನು ಪೊಲೀಸರ ದಿಕ್ಕು ತಪ್ಪಿಸಲು ಒಂದು ಬಸ್ನಲ್ಲಿ ಒಂದೇ ಸ್ಟಾಪ್ವರೆಗೆ ಮಾತ್ರ ಶಂಕಿತ ಪ್ರಯಾಣ ಮಾಡಿದ್ದು, ಪ್ರತಿಯೊಂದು ಸ್ಟಾಪ್ಗೂ ಬಸ್ ಬದಲಾವಣೆ ಮಾಡಿದ್ದಾರೆ. ಹೀಗೆ ಸುಮಾರು 15ಕ್ಕೂ ಅಧಿಕ ಬಸ್ಗಳಲ್ಲಿ ಪ್ರಯಾಣ ಮಾಡಿ, ಸ್ಫೋಟದ ಸ್ಥಳಕ್ಕೆ ಬಂದಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಶಂಕಿತ ವ್ಯಕ್ತಿ ತಾನು ಪ್ರಯಾಣ ಆರಂಭಿಸಿ ಅಂತ್ಯಗೊಳಿಸಿದ ಸ್ಥಳ ಸಿಗದಂತೆ ಪ್ಲಾನ್ ಮಾಡಿದ್ದಾನೆ. ಬೇರೆ ಬೇರೆ ರೂಟ್ನ ಬಸ್ ಗಳಲ್ಲಿ ಪ್ರಯಾಣ ಮಾಡಿದ್ದು, ಕೆಲ ಬಸ್ಗಳಲ್ಲಿ ಟಿಕೆಟ್ ಪಡೆದರೆ, ಕೆಲ ಬಸ್ಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣ ಮಾಡಿದ್ದಾನೆ.
ಇದಷ್ಟೇ ಅಲ್ಲ.. ಶಂಕಿತ ವ್ಯಕ್ತಿ ತನ್ನ ಯಾವುದೇ ಸುಳಿವು ಸಿಗದಂತೆ ಪ್ಲಾನ್ ಮಾಡಿ, ಅದನ್ನು ಎಕ್ಸಿಕ್ಯೂಟ್ ಮಾಡಿದ್ದಾನೆ,ಬಾಂಬ್ ಇಟ್ಟು ಅದು ಒಂದೂವರೆ ಗಂಟೆಗಳ ಬಳಿಕ ಸ್ಫೋಟಗೊಳ್ಳುವಂತೆ ಟೈಮ್ ಫಿಕ್ಸ್ ಮಾಡಿದ್ದಾನೆ. ಅದ್ಯಾಕೆ ಈ ರೀತಿ ಮಾಡಿದ್ದ ಎಂದು ಪರಿಶೀಲಿಸಿದಾಗ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ರಾಮೇಶ್ವರಂ ಕೆಫೆಯಿಂದ ಬೆಂಗಳೂರಿನ ಹೊರಹೋಗಲು ಶಂಕಿತ ಮೊದಲೇ ಪ್ಲಾನ್ ಮಾಡಿದ್ದ ಅದಕ್ಕೆ ಬೇಕಾದ ಎಲ್ಲ ಬ್ಲೂಪ್ರಿಂಟ್ ರೆಡಿಮಾಡಿಕೊಂಡಿದೆ. ರಾಮೇಶ್ವರಂ ಕೆಫೆ ಸ್ಥಳದಿಂದ ಹೊಸೂರು ಬಾರ್ಡರ್ಗೆ ಹೋಗೋಕೆ ಕನಿಷ್ಠ ಒಂದು ಗಂಟೆ ಬೇಕು. ಒಂದು ವೇಳೆ ಟ್ರಾಫಿಕ್ ಇದ್ರೂ 1 ಗಂಟೆ 15 ನಿಮಿಷದಲ್ಲಿ ರೀಚ್ ಆಗಬಹುದು. ಹೀಗಾಗಿ ಒಂದೂವರೆ ಗಂಟೆಯಲ್ಲಿ ಬೆಂಗಳೂರು ತೊರೆಲು ಪ್ಲಾನ್ ಮಾಡಿದ್ದ ಶಂಕಿತ ಅದರಂತೆ ಬಾಂಬ್ ಇಟ್ಟು ಒಂದೂವರೆ ಗಂಟೆಯ ಬಳಿಕ ಸ್ಫೋಟವಾಗುವಂತೆ ಟೈಮ್ ಫಿಕ್ಸ್ ಮಾಡಿದ್ದ ಅನ್ನೋದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಂಡಿದ್ದು ಬಾಂಬ್ ಎಂದು ತಿಳಿದು, ಪೊಲೀಸರು ನಗರದಲ್ಲಿ ಅಲರ್ಟ್ ಆಗುವಷ್ಟರಲ್ಲೇ ಶಂಕಿತ ವ್ಯಕ್ತಿ ಬೆಂಗಳೂರು ತೊರೆದಿರುವ ಬಗ್ಗೆ ಪೊಲೀಸರಿಗೆ ಅನುಮಾನ ಇದೆ. ಆತ ಬಾಂಬ್ ಇಟ್ಟು ರಾಮೇಶ್ವರಂ ಕೆಫೆಯಿಂದ ಹೊರ ಬಂದವನೇ ವೈಟ್ಫೀಲ್ಡ್ ಕಡೆಗೆ ತೆರಳಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಆತ ಹೊರ ರಾಜ್ಯಗಳಿಗೆ ಪರಾರಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ತಮಿಳುನಾಡು ಗಡಿವರೆಗಿನ ಎಲ್ಲ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆ ತಮಿಳುನಾಡು, ಕೇರಳ ಪೊಲೀಸರ ಜೊತೆಗೂ ಬೆಂಗಳೂರು ನಿರಂತರ ಪೊಲೀಸರ ಸಂಪರ್ಕದಲ್ಲಿದ್ದಾರೆ. ಇನ್ನು ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಶಂಕಿತನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
, ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಆರೋಪಿಯನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ.