ವಿಟ್ಲ: ಸಾಲೆತ್ತೂರು ಕೊಡಂಗೆಯ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಂದರ್ಭ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಂಡ ಇಬ್ಬರ ಪತ್ತೆಗಾಗಿ ಕರ್ನಾಟಕ ಹಾಗೂ ಕೇರಳ ಪೊಲೀಸರ ವಿಶೇಷ ತಂಡ ವಿವಿಧ ಕಡೆಯಲ್ಲಿ ತಪಾಸಣೆಯನ್ನು ನಡೆಸುತ್ತಿದೆ.
ಡಿ ಗ್ಯಾಂಗ್ ಮುಖ್ಯಸ್ಥ ಎಂದು ಹೇಳಲಾಗುತ್ತಿರುವ ಮೀಯಪದವು ನಿವಾಸಿ ರಹೀಮ್ ಸಹಿತ ಇನ್ನೋರ್ವ ವ್ಯಕ್ತಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದರು. ಇವರ ಜಾಡು ಹಿಡಿದು ವಿಶೇಷ ತನಿಖಾ ತಂಡಗಳು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಕೇರಳದ ಮೀಯಪದವಿನಲ್ಲಿ ಬಾರೀ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಪೊಲೀಸರು ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮೀಯಪದವು ನಿವಾಸಿ ರಿಕ್ಷಾ ಚಾಲಕ್ ಅಬ್ದುಲ್ ನೌಫಲ್ (೨೦) ಎಂಬಾತನನ್ನು ಬಂಧಿಸಲಾಗಿದೆ.ಈತನ ಬಳಿಯಿಂದ ೧೪೨ಕೆ.ಜಿ. ಗಾಂಜಾ ಹಾಗೂ ೨೭.೫ ಗ್ರಾಂ. ಎಂ. ಡಿ. ಎಂ. ಎ. ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಮಾದಕ ವಸ್ತುಗಳು ಪತ್ತೆಯಾದ ಸ್ಥಳ ಡಿ ಗ್ಯಾಂಗ್ ಕಾರ್ಯಾಚರಿಸುವ ಸ್ಥಳ ಎಂದು ಹೇಳಲಾಗಿದೆ.