ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ಬೈಕ್ನಲ್ಲಿ ಲೆಕ್ಚರರ್ ನರಸಪ್ಪ (51) ಮತ್ತು ಇನ್ನೊಂದು ಬೈಕ್ನಲ್ಲಿ ಯುವಕನ ಜತೆ ಸಾಗುತ್ತಿದ್ದ ಕಿಂಡರ್ ಗಾರ್ಟನ್ ಟೀಚರ್ ರಕ್ಷಾ (21) ಮೃತಪಟ್ಟವರು.
ಚಂದನ್ ಎಂಬ ಯುವಕ ರಕ್ಷಾ ಎನ್ನುವ ಯುವತಿ ಜತೆ ಪಲ್ಸರ್ ಬೈಕ್ನಲ್ಲಿ ಸಾಗುತ್ತಿದ್ದರು. ಕೆಂಗೇರಿ ಸಮೀಪದ ಮಾರುತಿ ನಗರದ ಮುಖ್ಯ ರಸ್ತೆಯಲ್ಲಿ ಕೆಎಲ್ಇ ಕಾಲೇಜು ಕಡೆ ರಾತ್ರಿ 11.40ರ ಸುಮಾರಿಗೆ ಸ್ಪೀಡಾಗಿ ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ನರಸಪ್ಪ ಎಂಬವರು ಓಡಿಸುತ್ತಿದ್ದ ಬೈಕ್ಗೆ ಆತ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಬೈಕ್ನಿಂದ ಉರುಳಿಬಿದ್ದು ನರಸಪ್ಪ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಸಂದರ್ಭದಲ್ಲಿ ಚಂದನ್ ಮತ್ತು ರಕ್ಷಾಗೂ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ರಕ್ಷಾ ಕೂಡಾ ಮೃತಪಟ್ಟಿದ್ದಾಳೆ. ಸದ್ಯ ಗಾಯಾಳು ಚಂದನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.