ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರಿಗೆ ಭಯೋತ್ಪಾದನಾ ಕೃತ್ಯವೆಸಗಲು ‘ಕ್ರಿಪ್ಟೋ ಕರೆನ್ಸಿ’ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂಪಾಯಿ ನೆರವು ಕೊಟ್ಟಿರುವ ಆತಂಕಕಾರಿ ವಿಚಾರ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ಫೇಸ್ಬುಕ್, ಟೆಲಿಗ್ರಾಂ ಮುಖೇನ ಬಿಟ್ ಕಾಯಿನ್ ಸಂಗ್ರಹಿಸಿ, ಡಾರ್ಕ್ ನೆಟ್ ಮುಖಾಂತರ ವಿವಿಧ ವ್ಯಾಲೆಟ್ಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಸಂಗತಿ ತನಿಖೆಯಲ್ಲಿ ಸಾಬೀತಾಗಿದೆ.
ಈವರೆಗೆ ಹವಾಲಾ ದಂಧೆ ಹಾಗೂ ಅನಾಮಿಕರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ತಲುಪಿಸುತ್ತಿದ್ದ ಭಯೋತ್ಪಾದಕ ಸಂಘಟನೆಗಳಿಗೆ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಡಿಜಿಟಲ್ ಕರೆನ್ಸಿ ಮೂಲಕ ಹಣಕಾಸಿನ ಸಹಾಯ ಮಾಡುತ್ತಿವೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್ಗಳು ಡಾರ್ಕ್ ವೆಬ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಳುಹಿಸಿರುವುದು ದೃಢಪಟ್ಟಿದೆ.
ಈ ಬಗ್ಗೆ ಎನ್ಐಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ಶೀಟ್ನಲ್ಲೂ ಉಲ್ಲೇಖಿಸಿದೆ. ಡಾರ್ಕ್ ನೆಟ್ನಲ್ಲಿ ಯಾವುದೇ ರೀತಿಯ ವಹಿವಾಟು ನಡೆಸಿದರೆ ಬಳಕೆದಾರರ ವೈಯಕ್ತಿಕ ಮಾಹಿತಿ, ಸ್ಥಳದ ಕುರಿತ ವಿವರಗಳು ಬಹಿರಂಗವಾಗುವುದಿಲ್ಲ. ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ಪತ್ತೆಹಚ್ಚುವುದು ಕಷ್ಟಸಾಧ್ಯ. ಡಾರ್ಕ್ ವೆಬ್ನಲ್ಲಿ ನೂರಾರು ಜಾಲತಾಣಗಳಿದ್ದು, ಇಲ್ಲಿ ವಹಿವಾಟು ನಡೆಸಿದರೆ ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸ ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಭಯೋತ್ಪಾದಕ ಕೃತ್ಯಗಳಿಗೆ ಡಾರ್ಕ್ ವೆಬ್ನಲ್ಲಿ ಹಣಕಾಸು ವ್ಯವಹಾರ ಮಾಡಲಾಗಿದೆ.