ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯ ಸೋಲಿನ ಕಾರಣಗಳ ಪಟ್ಟಿ ಉದ್ದುದ್ದ ಬೆಳೆಯುತ್ತಿದೆ. ಈ ನಡುವೆ ಬಿಜೆಪಿ ನಾಯಕರು ದೈವಕ್ಕೆ ಮಾಡಿದ ನಿಂದನೆಯಿಂದ ಸೋಲು ಅನುಭವಿಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಬಿಜೆಪಿಯ ಅಭ್ಯರ್ಥಿ ಹಾಲಿ ಸಚಿವ ಜೆಸಿ ಮಾಧುಸ್ವಾಮಿ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ವಿರುದ್ಧ ಸೋಲನುಭವಿಸಿದ್ದಾರೆ. ಮಾಧು ಸ್ವಾಮಿ ಸೋಲಿಗೆ ಬಂಜಾರ ಸಮುದಾಯದ ಕಿಚ್ಚು ಕಾರಣ ಎನ್ನಲಾಗುತ್ತಿದೆ. ಒಳ ಮೀಸಲಾತಿ ನೀಡಿದ್ದ ಬಿಜೆಪಿ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಮುದಾಯ ಕ್ಷೇತ್ರದಲ್ಲಿ ಭಾರಿ ಪ್ರತಿಭಟನೆ ನಡೆಸಿತ್ತು.
ತುಳುಭಾಷಿಗರಿಗೆ, ದೈವಕ್ಕೆ ಮಾಧುಸ್ವಾಮಿ ಅವಮಾನ
ತುಳು ಭಾಷೆ ನಮ್ಮ ಕಡೆ (ಕರಾವಳಿ ಜಿಲ್ಲೆ) ದೈವ ಮಾತನಾಡುವ ಭಾಷೆ ಎಂಬ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರ ಹೇಳಿಕೆಗೆ ಕುಹಕವಾಡಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ವಿಧಾಸಭೆಯಲ್ಲಿ ಯು.ಟಿ ಖಾದರ್ ಅವರು ಮಾತನಾಡುತ್ತಾ “ತುಳು ಭಾಷೆ ನಮ್ಮ ಕಡೆ (ಕರಾವಳಿ ಜಿಲ್ಲೆ) ದೈವ ಮಾತನಾಡುವ ಭಾಷೆ. ತುಳುವಿನಲ್ಲಿ ಯಕ್ಷಗಾನ ಮತ್ತು ಲಿಪಿಯ ಬಗ್ಗೆ ಅಕಾಡೆಮಿ ಇದೆ. ಇದನ್ನು ಶಾಲೆ ಮತ್ತು ಕಾಲೇಜುಗಳಲ್ಲಿ ಐಚ್ಛಿಕ ವಿಷಯವಾಗಿ ಕಲಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಮಿತಿಯನ್ನು ರಚಿಸುವ ಅಗತ್ಯ ಏನಿತ್ತು?” ಎಂದು ಪ್ರಶ್ನಿಸಿದ್ದರು. ಯು.ಟಿ ಖಾದರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಮಾಧುಸ್ವಾಮಿ ಅವರು, “ದೇವರು ಮಾತನಾಡುವುದು ನಿಮ್ಮ ಜಿಲ್ಲೆಯಲ್ಲಿ ಮಾತ್ರ, ನಮ್ಮ ಜಿಲ್ಲೆಗಳಲ್ಲಿ ದೇವರು ಮಾತನಾಡುವುದಿಲ್ಲಪ್ಪ’ ಎಂದು ಸಭಾಧ್ಯಕ್ಷರತ್ತ ನೋಡುತ್ತಾ ವ್ಯಂಗ್ಯವಾಡಿದ್ದರು.