ಬೆಂಗಳೂರು: ಅನಾಮಧೇಯ ಬೆದರಿಕೆ ಪತ್ರವೊಂದರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಿರಿಯ ನಟ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಭದ್ರತೆ ಹೆಚ್ಚಿಸಿದ್ದು ಗನ್ಮ್ಯಾನ್ ನೀಡಿದೆ.
ನಿನ್ನೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ.ಲಲಿತಾ ನಾಯಕ್, ನಟ ಶಿವರಾಜ್ ಕುಮಾರ್ ಹಾಗೂ ಬಿಜೆಪಿ ನಾಯಕ ಸಿ.ಟಿ.ರವಿಯವರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರಬಂದಿದೆ ಎಂದಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶಿವಣ್ಣನಿಗೆ ಭದ್ರತೆ ಒದಗಿಸಿದೆ.
ಬೆದರಿಕೆ ಪತ್ರ ಬಂದಿದೆ. ಅದರಲ್ಲಿ ನನ್ನೊಂದಿಗೆ ಇತರರ ಹೆಸರು ಇದೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಲಲಿತಾ ನಾಯಕ್ ಹೇಳಿದ್ದರು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಶಿವಣ್ಣ ನಿವಾಸಕ್ಕೆ ಎರಡು ಪಾಳಿಯಲ್ಲಿ ನಾಲ್ವರು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು ಜೊತೆಗೆ ಗನ್ ಮ್ಯಾನ್ ಕೂಡ ನೀಡಿದೆ. ಈ ಮಧ್ಯೆ ತಮ್ಮನ್ನು ಕೊಲ್ಲುವ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್ ಈ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದಿದ್ದಾರೆ.