


ಕಡಬ: ಬಾವಿಯೊಳಗಿನ ಕಲ್ಲು ಒಡೆಯಲು ಸ್ಪೋಟಕ ಬಳಸಿ ಸ್ಫೋಟ ನಡೆಸಿದ ಪರಿಣಾಮ ಸಮೀಪದ ಮನೆಯ ಕಟ್ಟಿಗೆ ಬಿರುಕು ಬಿದ್ದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ನಡೆದಿದೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಳಿಸಲಾಗಿದೆ.

ರಾಮಕುಂಜ ಗ್ರಾಮದ ಕಂಪ ಪ್ರದೇಶದಲ್ಲಿ ಜಮೀನು ಹೊಂದಿರುವ ಸೋಮಶೇಖರ್ ಅವರು ತಮ್ಮ ಜಮೀನಿನಲ್ಲಿ ಬಾವಿ ನಿರ್ಮಾಣದ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಕೋಡಿಂಬಾಳ ಗ್ರಾಮದ ಶಿವರಾಮ ಎಂಬವರಿಗೆ ಬಾವಿಯಲ್ಲಿರುವ ಕಲ್ಲು ಒಡೆಯುವ ಕೆಲಸವನ್ನು ವಹಿಸಿದ್ದರು ಎಂದು ತಿಳಿದುಬಂದಿದೆ. ಮಾರ್ಚ್ 8ರಂದು ಶಿವರಾಮ ಅವರು ಬಾವಿಯೊಳಗಿನ ಕಲ್ಲು ಒಡೆಯಲು ಸ್ಪೋಟಕ ಬಳಸಿ ಸ್ಫೋಟ ನಡೆಸಲು ಸಿದ್ಧತೆ ನಡೆಸಿರುವುದು ಗಮನಕ್ಕೆ ಬಂದಿದ್ದು, ಇದನ್ನು ಕಂಡ ಸ್ಥಳೀಯ ನಿವಾಸಿಗಳು ಸಮೀಪದಲ್ಲಿ ಮನೆಗಳು ಇರುವುದರಿಂದ ಸೊತ್ತು ಮತ್ತು ಜೀವ ಹಾನಿಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿ ಸ್ಫೋಟ ನಡೆಸದಂತೆ ಎಚ್ಚರಿಕೆ ನೀಡಿದ್ದರು.
ಆದರೂ ಕೆಲವೇ ಹೊತ್ತಿನ ಬಳಿಕ ಶಿವರಾಮ ಅವರು ಸ್ಪೋಟಕ ಬಳಸಿ ಸ್ಫೋಟ ನಡೆಸಿದ್ದಾರೆ ಎನ್ನಲಾಗಿದೆ. ಸ್ಫೋಟದ ಪರಿಣಾಮವಾಗಿ ಸಮೀಪದಲ್ಲಿದ್ದ ಮನೆಯ ಕಟ್ಟಿಗೆ ಬಿರುಕು ಬಿದ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಮಾರ್ಚ್ 8ರಂದು ಬಂದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 28/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 288, 3(5) ಹಾಗೂ ಸ್ಪೋಟಕ ಕಾಯ್ದೆ 1884ರ ಕಲಂ 9(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








