

ಹಾಸನ: ಪ್ರೀತಿಸಿ ಅವರಿಬ್ಬರೂ ಮದುವೆಯಾಗಿದ್ದರು. ಆದ್ರೆ ಆತನಿಗೆ ಆಕೆಗಿಂತಲೂ ಹಣದ ಮೋಹವೇ ಜಾಸ್ತಿಯಾಗಿತ್ತು. ಪತಿರಾಯ ಹೆಂಡತಿಯನ್ನು ನದಿಗೆ ದೂಡಿ ಕೊಲೆ ಮಾಡಿದ್ದಾರೆ ಎಂದು ಯುವತಿಯ ಪೋಷಕರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ ಹಾಗೂ ಸಕಲೇಶಪುರ ತಾಲೂಕಿನ ರಾಮನ ಹಳ್ಳಿ ಗ್ರಾಮದ ಅಶ್ವಥ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದ್ರೆ ಆಗಸ್ಟ್ 5ರಂದು ಹಾಸನ ಜಿಲ್ಲೆ ಸಕಲೇಶಪುರದ ಸೇತುವೆಯ ಮೇಲಿಂದ ನಾಪತ್ತೆಯಾದ ಯುವತಿಯ ಶವ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳ ಆರೋಪದ ಹಿನ್ನಲೆ ಈ ಘಟನೆ ನಡೆದಿದೆ ಎಂಬ ಅನುಮಾನ ಬಲವಾಗಿದೆ.

ಸದ್ಯ ನಾಲ್ಕು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಮಗಳ ಮೃತದೇಹ ನೋಡಿದ ಪೋಷಕರ ಆಕ್ರಂದನ ಮುಗಿಳು ಮುಟ್ಟಿದೆ. ಮಗಳನ್ನ ಅಳಿಯ ಅಶ್ವತ್ಥ್ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆಂದು ಪೋಷಕರು ಆರೋಪ ಮಾಡಿದ್ದಾರೆ. ಪೂಜಾಳ ಸಾವಿನ ಕೆಲ ದಿನಗಳ ಹಿಂದೆ ಪತಿ ಮನೆಯವರಿಂದ ಕಿರುಕುಳವಾಗ್ತಿದೆ ಎಂದು ಪೂಜಾ ತನ್ನ ಮನೆಯವರ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳಂತೆ.
ಹೀಗಾಗಿ ಇದೇ ವಿಚಾರವಾಗಿ ಮಾತನಾಡಲು ಪೂಜಾ ಪತಿ ಅಶ್ವತ್ಥ್ ಮನೆಗೆ ಪೋಷಕರು ಬಂದಿದ್ದರು. ಪೋಷಕರು ಮನೆಗೆ ಬರುತ್ತಿದ್ದಂತೆ ಅಶ್ವತ್ಥ್ ಮನೆ ಬಿಟ್ಟು ಓಡಿಹೋಗಿದ್ದ. ಈ ವೇಳೆ ಅಶ್ವತ್ಥ್ನನ್ನು ಕರೆತರುವುದಾಗಿ ಹೇಳಿ ಪೂಜಾ, ಪತಿಯನ್ನು ಹಿಂಬಾಲಿಸಿ ಹೋಗಿದ್ದಳು. ಈ ವೇಳೆ ಪತಿಯೇ ಪೂಜಾಳನ್ನು ನದಿಗೆ ತಳ್ಳಿದ್ದಾಗಿ ಪೋಷಕರು ಆರೋಪ ಮಾಡಿದ್ದಾರೆ.










