


ಮಂಗಳೂರು: ನಗರದ ನಂತೂರು ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸಹಸವಾರೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಬಲ್ಲಾಳ್ಬಾಗ್ ನಿವಾಸಿ ದೀಪ್ತಿ (26) ಮೃತ ದುರ್ದೈವಿ. ದ್ವಿಚಕ್ರ ವಾಹನ ಸವಾರ ಕಿಶೋರ್ (32) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿಚಕ್ರ ವಾಹನವು ಬಲ್ಲಾಳ್ಬಾಗ್ ಕಡೆಯಿಂದ ವಾಮಂಜೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದಾಗಿ ಸಹಸವಾರೆ ದೀಪ್ತಿ ಬಸ್ನ ಮುಂಭಾಗದ ಚಕ್ರಕ್ಕೆ ಸಿಲುಕಿ ಮುಂದೆ ತಳ್ಳಲ್ಪಟ್ಟಿದ್ದು, ಬಸ್ನ ಟಯರ್ ಅವರ ಮೇಲೆ ಹರಿದಿದೆ ಎನ್ನಲಾಗಿದೆ. ಕೂಡಲೇ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ನಂತೂರು ಬಳಿಯ ಬಸ್ ನಿಲ್ದಾಣದ ಎದುರಲ್ಲೇ ಘಟನೆ ನಡೆದಿದ್ದು, ಕುಡುಪು ಭಾಗಕ್ಕೆ ತೆರಳುತ್ತಿದ್ದ 22 ನಂಬರಿನ ಖಾಸಗಿ ಬಸ್ ಡಿಕ್ಕಿಯಾಗಿದೆ. ಯುವತಿ ಮತ್ತು ಯುವಕ ವಾಮಂಜೂರಿನಲ್ಲಿ ಬರ್ತ್ ಡೇ ಪಾರ್ಟಿಗೆಂದು ತೆರಳುತ್ತಿದ್ದರೆಂದು ತಿಳಿದುಬಂದಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








