ಮಂಗಳೂರು: ಕೇರಳ ಮೂಲದ ಆರೋಪಿಗಳ 50 ಲಕ್ಷ ರೂ ಮೌಲ್ಯದ ಜಾಗ್ವಾರ್ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ತನಿಖೆ ಸಿಐಡಿ ಪೊಲೀಸರಿಂದ ನಡೆಯುತ್ತಿರುವಾಗಲೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಇಬ್ಬರಲ್ಲಿ ಒಬ್ಬರಿಗೆ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಪದಕ ದೊರಕಿತ್ತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಐ ಆಗಿರುವ, ಮಂಗಳೂರಿನಲ್ಲಿ ಹಿಂದೆ ಸಿಸಿಬಿ ಎಸ್ಐ ಆಗಿದ್ದ ಮುಖ್ಯಮಂತ್ರಿ ಪದಕ ವಿಜೇತ ಕಬ್ಬಾಳ್ ರಾಜ್ ಮತ್ತು ಮಂಗಳೂರಿನ ನಾರ್ಕೊಟಿಕ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡವರು.
ವಂಚನೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಜಾಗ್ವಾರ್ ಕಾರನ್ನು, ಮಂಗಳೂರು ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಮತ್ತು ಇತರರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬಳಿಕ ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ ತನಿಖೆ ಮಾಡಿ ವರದಿ ನೀಡಲು ಸೂಚಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಹೆಚ್ಚುವರು ಪೋಲಿಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಅವರಿಗೆ ಸಲ್ಲಿಸಿದ 35 ಪುಟಗಳ ಮದ್ಯಂತರ ವರದಿಯಲ್ಲಿ ನಾರ್ಕೊಟಿಕ್ ಅಂಡ್ ಎಕಾನಮಿ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ರಾಮಕೃಷ್ಣ, ನಗರ ಅಪರಾಧ ಪತ್ತೆ ದಳದ ಹಿಂದಿನ ಎಸ್ಐ ಕಬ್ಬಾಳ್ ರಾಜ್, ಸಿಸಿಬಿ ಟೀಮ್ ನ ಆಶಿತ್, ರಾಜ ಅವರು ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ ಪೋಲಿಸ್ ಬ್ರೋಕರ್ ದಿವ್ಯದರ್ಶನ್ ವಿರುದ್ದ ಕೂಡ ಬೊಟ್ಟು ಮಾಡಲಾಗಿತ್ತು. ಅವರು ವರದಿ ನೀಡಿದ ಬಳಿಕ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು.
ಕಳಂಕಿತ ನಾಲ್ವರು ಕರ್ತವ್ಯದಲ್ಲಿರುವಾಗಲೇ ಸಿಐಡಿ ತನಿಖೆ ಎದುರಿಸುತ್ತಿರುವುದು ಸಾರ್ವ ಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ಯಾವುದೇ ಇಲಾಖೆಯಲ್ಲಿ ಆಪಾದನೆ ಗೊಳಗಾದವರನ್ನು ತನಿಖೆ ಸಮಯದಲ್ಲಿ ದೀರ್ಘ ರಜೆ ಅಥವಾ ಅಮಾನತು ಮಾಡಲಾಗುತ್ತದೆ. ಆದರೆ ಕಾರು ಮಾರಾಟ ಪ್ರಕರಣ ದಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಿ, 10 ದಿನ ಕಳೆದರು ಕಳಂಕಿತರ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ನಾಲ್ವರ ಪೈಕಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಇನ್ನಿಬ್ಬರು ತೂಗುಕತ್ತಿಯಿಂದ ಸದ್ಯ ಬಚಾವಾಗಿದ್ದಾರೆ.
ಪಾಂಡೇಶ್ವರದ ಎಕನಾಮಿಕ್ ಮತ್ತು ನಾರ್ಕೋಟಿಕ್ ಠಾಣೆ ಯಲ್ಲಿ ದಾಖಲಾಗಿದ್ದ 30 ಕೋಟಿ ವಂಚನೆ ಪ್ರಕರಣ ಈಗ ಸಿಐಡಿಗೆ ಹಸ್ತಾಂತರವಾಗಿದೆ. ಕೇರಳ ಮೂಲದ ಟೋಮಿ ಮ್ಯಾಥ್ಯು ಮತ್ತು ಟಿ.ರಾಜನ್ ಸೇರಿ ಕಬಕದಲ್ಲಿ ಎಲಿಯ ಕನ್ಸ್ಟ್ರಕ್ಷನ್ ಹೆಸರಿನಲ್ಲಿ ಹಣ ದ್ವಿಗುಣಗೊಳಿಸುವ ಮನಿ ಡಬ್ಲಿಂಗ್ ಜಾಲ ನಡೆಸುತ್ತಿದ್ದರು, ಮಂಗಳೂರಿನ ಶಕ್ತಿ ನಗರದ ಮಹಿಳೆಗೆ ಈ ಸಂಸ್ಥೆಯು 4 ಲಕ್ಷ ರೂ ವಂಚಿಸಿತ್ತು, ಈ ಬಗ್ಗೆ ಮಹಿಳೆ ಅ.16 ರಂದು ನಗರದಲ್ಲಿ ದೂರು ನೀಡಿದ್ದು ನಾರ್ಕೊಟಿಕ್ ಠಾಣೆ ಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಧ್ಯೆ ಪ್ರವೇಶಿಸಿದ ಸಿಸಿಬಿ ಪೊಲೀಸರಿಂದಲೇ ಬಳಿಕ ಕಾರು ಡೀಲ್ ನಡೆದಿದೆ ಎನ್ನಲಾಗುತ್ತಿದೆ. ಆದುದರಿಂದ ಹಣ ಡಬ್ಲಿಂಗ್ ಕೇಸ್ ಸಿಐಡಿ ತನಿಖೆಗೆ ತೆಗೆದುಕೊಂಡಿದ್ದು. ಕಾರು ಮಾರಾಟ ತನಿಖೆಯು ಈ ಪ್ರಕರಣದಡಿ ಬರಲಿದೆ.
ಪ್ರಕರಣದ ತನಿಖೆಗೆ ಸಿಐಡಿ ಇನ್ ಸ್ಪೆಕ್ಟರ್ , ಸಿಬ್ಬಂದಿ ನೇತೃತ್ವದ ಮೂವರ ತಂಡ ಮಂಗಳೂರಿಗೆ ಆಗಮಿಸಿ, ನಾನಾ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭ ಕಳಂಕಿತ ನಾಲ್ವರಿಗೂ ಸಿಐಡಿ ನೋಟಿಸ್ ನೀಡಿದ್ದು, ಇವರು ಬೆಂಗಳೂರು ಸಿಐಡಿ ಕಚೇರಿಯಲ್ಲಿ ವಿಚಾರಣೆ ಏದುರಿಸಬೇಕಿದೆ. ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿಎಸ್ಪಿ ರೋಹಿಣಿ ಕಟೂಚ್ ನೇತೃತ್ವದ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ಮುಂದುವರಿಸಲಿದ್ದಾರೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿ ಗೆ ಸಲ್ಲಿಸಲಿದ್ದು, ಅದು ರಾಜ್ಯ ಡಿಜಿಪಿ ಪ್ರವಿಣ್ ಸೂದ್ ರಿಗೆ ಸಲ್ಲಿಕೆಯಾಗಲಿದೆ.
ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ನಿಡುತ್ತಿದ್ದಂತೆ ಕಳೆದ 2 ವರ್ಷಗಳಲ್ಲಿ ಸಿಸಿಬಿ ಪೋಲೀಸರ ಜತೆಗೆ ಹಣದ ಡೀಲ್ ನಡಸಿದವರಿಗೂ ಆತಂಕ ಎದುರಾಗಿದೆ. ಇಂತಹ ಕುಳಗಳಿಗೆ ಸ್ವತಃ ಕಳಂಕಿತ ಅಧಿಕಾರಿಯೇ ಕರೆ ಮಾಡಿ ಧೈರ್ಯದ ಮಾತು ಹೇಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.