ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಬಹುಕೋಟಿ ವಂಚನೆ ಆರೋಪ ಮೇರೆಗೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕೆಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದೀಗ ಚೈತ್ರಾ ಕುಂದಾಪುರ ಬಳಸುತ್ತಿದ್ದ ಕಿಯಾ ಕಂಪನಿಯ ಕಾರನ್ನು ಬಾಗಲಕೋಟೆಯಲ್ಲಿ ಮುಧೋಳದಲ್ಲಿ ಪತ್ತೆಯಾಗಿದೆ.
ಚೈತ್ರಾ ಪ್ರಕರಣ ಹೊರಬೀಳುತ್ತಿದ್ದಂತೆಯೇ ಆರೋಪಿ ಶ್ರೀಕಾಂತ್, ಕಿರಣ್ಗೆ ಕರೆ ಮಾಡಿದ್ದಾನೆ. ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿದೆ. ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮ ಬಳಿ ಇಟ್ಕೊಳಿ ಎಂದು ಹೇಳಿರುವುದು ಇದೀಗ ಬಯಲಾಗಿದೆ.
ಶ್ರೀಕಾಂತ್ ಹೇಳಿದಂತೆ ಕಿರಣ್ ಅವರು ಸೆಪ್ಟೆಂಬರ್ 9 ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರನ್ನುತಂದು ತನ್ನ ಡ್ರೈವಿಂಗ್ ಸ್ಕೂಲ್ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್, ಕಿರಣ್ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸೌಟ್ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್ ವಶಕ್ಕೆ ಪಡೆದು ಕಾರು ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕಿರಣ್ ಗಣಪ್ಪಗೊಳದ ಹಿಂದೂ ಕಾರ್ಯಕರ್ತ. ಕಳೆದ ಹಲವಾರು ವರ್ಷಗಳಿಂದ ಡ್ರೈವಿಂಗ್ ಸ್ಕೂ ಲ್ ನಡೆಸುತ್ತಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಕಾರಣ ಮೂರು ಬಾರಿ ಮುಧೋಳ ನಗರಕ್ಕೆ ಚೈತ್ರಾ ಕುಂದಾಪುರ ಅವರನ್ನು ಭಾಷಣಕ್ಕೆ ಕರೆಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಆಗಿತ್ತು.
ಸದ್ಯ ಕಿರಣ್ ಡ್ರೈವಿಂಗ್ ಸ್ಕೂಲ್ನಲ್ಲಿದ್ದ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಯಾ ಕಾರು ಚೈತ್ರಾ ಬಾಲಕೃಷ್ಣ ಕುಂದಾಪುರ ಹೆಸರಲ್ಲಿದೆ. ಇದನ್ನು 2023ರಲ್ಲಿ ಚೈತ್ರಾ ಖರೀದಿ ಮಾಡಿದ್ದರು.