ವಿಟ್ಲ: ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ) ಶಾಲೆಯಲ್ಲಿ ಅನುಮತಿ ಇಲ್ಲದೇ ಸ್ಥಳೀಯ ಯುವಕರ ತಂಡ ಕ್ರಿಕೆಟ್ ಪಂದ್ಯಾಟ ನಡೆಸಿದ್ದು, ಈ ವೇಳೆ ಶಾಲೆಯ ಕಿಟಕಿಗೆ ಹಾನಿಯಾದ ಘಟನೆ ನಡೆದಿತ್ತು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿಟ್ಲ ಪೊಲೀಸರು ಕ್ರಿಕೆಟ್ ತಂಡದ ಯುವಕರನ್ನು ಠಾಣೆಗೆ ಕರೆಸಿ ಹಾನಿಗೊಳಗಾದ ವಸ್ತುಗಳನ್ನು ಸರಿಪಡಿಸುವಂತೆ ತಿಳಿಸಿದ್ದಾರೆ. ತಪ್ಪೊಪ್ಪಿಕೊಂಡ ಯುವಕರು ಹಾನಿಗೊಳಗಾದ ಕಿಟಕಿ ಗಾಜುಗಳನ್ನು ಸರಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಶಾಲೆಯಲ್ಲಿ ರಾತ್ರಿ ವೇಳೆ ಜೂಜಾಟ ನಡೆಯುತ್ತಿದ್ದ ಬಗ್ಗೆ ಗಮನಕ್ಕೆ ಬಂದ ಮುಖ್ಯೋಪಾಧ್ಯಾಯರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ದಾಳಿಯನ್ನು ನಡೆಸಿದ್ದರು.
ಸರಕಾರಿ ಶಾಲೆಯನ್ನು ಕೆಲ ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಜುಗಾರಿ ಅಡ್ಡೆಯಾಗಿ ಬಳಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರಕಾರಿ ಶಾಲೆಗಳನ್ನು ತಮ್ಮ ಮನೆಯಂತೆ ನೋಡಿಕೊಂಡು ಸಹಾಯ ಮಾಡೋಕೆ ಆಗದಿದ್ದರು ತೊಂದರೆ ಮಾಡಬೇಡಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.