ನವದೆಹಲಿ: ಇಂದು ಬಹು ನಿರೀಕ್ಷಿತ ಪ್ರಸಕ್ತ ಸಾಲಿನ ಮುಂಗಡ ಪತ್ರ ಮಂಡನೆ ಆಗಲಿದೆ. ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, 2021-2022ರ ಕೇಂದ್ರ ಬಜೆಟ್ ಮೊದಲ ಬಾರಿಗೆ ಕಾಗದ ರಹಿತ ಮಾದರಿಯಲ್ಲಿ ಮಂಡಿಸುತ್ತಿರುವುದು ವಿಶೇಷವೆನಿಸಿದೆ.
ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಅರ್ಥ ವ್ಯವಸ್ಥೆಯನ್ನು ಹಳಿಗೆ ತರಲು ಕಸರತ್ತು ನಡೆಸಬೇಕಿದೆ. ಈ ಬಾರಿ ಎಲ್ಲಾ ವಲಯಗಳ ಮೇಲೂ ನಿರ್ಮಲಾ ಸೀತಾರಾಮನ್ ದೃಷ್ಟಿ ಹಾಯಿಸಬೇಕಾದ ಜರೂರತ್ತು ಹೊಂದಿದ್ದಾರೆ.ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದ್ದು, ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.91 ಕ್ಕೆ ಏರಿಕೆಯಾಗಿದೆ.
ಹೀಗಾಗಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಒತ್ತು ನೀಡುವ ನಿರೀಕ್ಷೆ ಇದೆ. ಕೊರೊನಾ ದಾಳಿಯಿಂದ ಆರೋಗ್ಯ ವ್ಯವಸ್ಥೆಯ ಪೊಳ್ಳುತನ ಕಂಡಿರುವ ಸರ್ಕಾರ, ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಹೆಚ್ಚಿಸುವ ಚಿಂತನೆ ನಡೆಸಲಾಗಿದೆ. ಕೊರೊನಾದಿಂದಾಗಿ ರಿಯಲ್ ಎಸ್ಟೇಟ್ ವಲಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ಉದ್ಯಮ ಕೂಡಾ ತೆರಿಗೆ ವಿನಾಯ್ತಿ ಆಶಯದಲ್ಲಿದೆ.
ಹೊಸ ಯೋಜನೆಗಳಿಗೆ ಅನುದಾನ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕಾರ್ಪೋರೇಟ್ ತೆರಿಗೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ಇದೆ.ಗಣಿಗಾರಿಕೆ, ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣ, ಭಾರತೀಯ ಜೀವ ವಿಮಾ ಕಂಪನಿಯಂತಹ ಬೃಹತ್ ಕಂಪನಿಗಳ ಅಲ್ಪ ಪ್ರಮಾಣದ ಪಾಲನ್ನು ಕೇಂದ್ರ ಮಾರಾಟಕ್ಕೆ ಮುಂದಾಗಬಹುದು ಎಂದು ಹೇಳಲಾಗಿದೆ.
ಈ ಮೂಲಕ ಸರ್ಕಾರ 4 ಸಾವಿರ ಕೋಟಿ ಡಾಲರ್ ಸಂಗ್ರಹದ ಗುರಿ ಹೊಂದಿದೆ. 2022ಕ್ಕೆ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಪ್ರಸಕ್ತ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಆಶಾಭಾವ ಹೊಂದಿದೆ.
ಎಂಎಸ್ಪಿ ಬಾಕಿ ಬಗ್ಗೆಯೂ ಸರ್ಕಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ರೈತ ಸಮ್ಮಾನ್ ಯೋಜನೆಯ ಮೊತ್ತವನ್ನೂ ಹೆಚ್ಚಿಸುವ ಬಗ್ಗೆ ಚರ್ಚೆ ಕೇಳಿ ಬರುತ್ತಿದೆ. ತೈಲ ಬೆಲೆ, ಅಡುಗೆ ಎಣ್ಣೆ ಬೆಲೆ ಅಂಕುಶವಿಲ್ಲದೇ ಗಗನಕ್ಕೇರುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಮಾರ್ಗಗಳನ್ನ ಸರ್ಕಾರ ಕಂಡುಕೊಳ್ಳುತ್ತಾ ಎಂದು ಇಂದು ನೋಡಬೇಕಿದೆ.