


ಚಾಮರಾಜನಗರ: ಗೆಳೆಯನ ಜತೆ ಪಾರ್ಟಿಗೆಂದು ಹೋಗಿದ್ದ ಯುವಕನೋರ್ವ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ಸಮೀಪ ದೊಡ್ಡಕರೆ ಏರಿ ಬಳಿ ನಡೆದಿದೆ.
ಗುಂಡ್ಲುಪೇಟೆಯ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ(23) ಮೃತಪಟ್ಟ ಯುವಕ. ಈತ ಬೆಂಗಳೂರು, ನಂಜನಗೂಡು ಹೀಗೆ ಹಲವೆಡೆ ಸಣ್ಣಪುಟ್ಟ ಕೂಲಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ಮನೆಗೆ ಬಂದಾಗ ಆತನ ಗೆಳೆಯ ಅಜಯ್ ಎಂಬಾತ ಬಲವಂತದಿಂದ ಪಾರ್ಟಿ ಮಾಡಲು ಕರೆದೊಯ್ದಿದ್ದ ಎನ್ನಲಾಗಿದೆ.
ಕತ್ತು ಸೀಳಿ ಕೊಲೆಮಾಡಿರುವ ಸ್ಥಿತಿಯಲ್ಲಿ ನಂಜುಂಡಸ್ವಾಮಿ ಮೃತದೇಹ ಪತ್ತೆಯಾಗಿದ್ದು, ಗಾಂಜಾ ಮತ್ತು ಅಥವಾ ಮದ್ಯದ ನಶೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ನಂಜುಂಡಸ್ವಾಮಿ ಸಹೋದರ ರಾಜು ನೀಡಿರುವ ದೂರಿನಂತೆ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ನಂಜುಂಡಸ್ವಾಮಿಯನ್ನು ಪಾರ್ಟಿಗೆ ಕರೆದೊಯ್ದಿದ್ದ ಅಜಯ್ ತಲೆ ಮರೆಸಿಕೊಂಡಿದ್ದು, ಆತ ಸಿಕ್ಕ ಬಳಿಕವೇ ಘಟನೆಯ ಸಂಪೂರ್ಣ ಸತ್ಯ ಬಯಲಾಗಲಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.








