ಕೌಟುಂಬಿಕ ಕಲಹದಿಂದ ನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ನಿವಾಸಿಯಾಗಿರುವ ಚಾಲಕ ಸುರೇಶ್ ಹಾಗೂ ಮಂಜುಳ ಎಂಬವರ ಪುತ್ರಿ ಮಹೇಶ್ವರಿ ಅಲಿಯಾಸ್ ಸ್ವಾತಿ (25) ನೇಣಿಗೆ ಶರಣಾದ ಮಹಿಳೆ. ಈಕೆಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ, ಅದೇ ತಾಲೂಕಿನ ಹಂಗಳ ಗ್ರಾಮದ ವಿನಯ್ ಜೊತೆ ಮದುವೆಯಾಗಿತ್ತು.
ಹಂಗಳದ ಗುಂಡ್ಲುಪೇಟೆ ಪಟ್ಟಣದ ದರ್ಶನ್ ಲೇಔಟ್ ನಲ್ಲಿ ವಾಸವಿದ್ದ ಈ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ “ಅಮ್ಮ ನಿನಗೆ ಒಳ್ಳೆಯ ಮಗಳಾಗಿ ಇರಲಿಲ್ಲ. ದಯವಿಟ್ಟು ಕ್ಷಮಿಸು. ನನ್ನ ಸಾವಿಗೆ ಯಾರು ಕಾರಣರಲ್ಲ. ಎಲ್ಲರೂ ನನ್ನನ್ನು ಕ್ಷಮಿಸಿ. ನನ್ನ ಮಮ್ಮಿ ತುಂಬಾ ಒಳ್ಳೆಯವರು. ಅಪ್ಪ, ಮಮ್ಮಿಯನ್ನು ಚೆನ್ನಾಗಿ ನೋಡಿಕೋ ಅಪ್ಪು (ತಮ್ಮ). ನಿನಗೆ ಒಳ್ಳೆಯ ಅಕ್ಕ ಸಿಗಲಿಲ್ಲ. ಲೈಫ್ ನಲ್ಲಿ ಎಲ್ಲರೂ ಚೆನ್ನಾಗಿರಬೇಕು, I am sorry” ಎಂದು ಬರೆಯಲಾಗಿತ್ತು.
ಸ್ವಾತಿ ಸಾವಿನ ವಿಚಾರ ತಿಳಿದ ಕೂಡಲೇ ಗ್ರಾಮದ ಮುಖಂಡರು ಹಾಗೂ ಪೋಷಕರು ಧಾವಿಸಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಹೇಶ್ವರಿ ಸಾಯುವ ಮುನ್ನ ಕೆಲವು ಗಂಟೆಗಳ ಹಿಂದೆಯಷ್ಟೇ ತಾಯಿಯ ಜೊತೆ ದೂರವಾಣಿ ಮೂಲಕ ಸ್ವಲ್ಪ ಹೊತ್ತು ಮಾತನಾಡಿದ್ದಾರೆ ಎನ್ನಲಾಗಿದೆ.
‘ಮದುವೆಯಾಗಿ ಆರೇಳು ತಿಂಗಳಲ್ಲಿ ಸ್ವಾತಿಯನ್ನು ತನ್ನ ತವರು ಮನೆಗೆ ಕಳುಹಿಸಿಕೊಡಲಿಲ್ಲ. ಮೃತಳಿಗೆ ಅತ್ತೆ ನಂದಿನಿ ಕೂಡ ಕಿರುಕುಳ ನೀಡುತ್ತಿದ್ದರು. ಅವಳನ್ನು ನೇಣು ಬಿಗಿದು ಕೊಲೆ ಮಾಡಲಾಗಿದೆ’ ಎಂದು ಪೋಷಕರ ಆರೋಪಿಸಿದ್ದು, ಈ ಸಂಬಂಧ ಮೃತ ಸ್ವಾತಿಯ ಪತಿ ವಿನಯ್ ಹಾಗೂ ಅತ್ತೆ ನಂದಿನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಚಿತ್ರಹಿಂಸೆ ಕೇಸ್ ದಾಖಲಾಗಿದೆ.