ಚೆನ್ನೈ: ಲೈಂಗಿಕ ಕಿರುಕುಳ ಆರೋಪಗಳ ಮೇಲೆ ಸ್ವಯಂ ಘೋಷಿತ ದೇವಮಾನವ ಹಾಗೂ ನಗರ ಹೊರವಲಯದ ವಸತಿ ಶಾಲೆಯ ಸಂಸ್ಥಾಪಕ ಶಿವಶಂಕರ ಬಾಬಾ ಎಂಬ ವ್ಯಕ್ತಿಯನ್ನು ಪೊಲೀಸರು ದೆಹಲಿ ಸಮೀಪ ಇಂದು ಬಂಧಿಸಿದ್ದಾರೆ.
ಆರೋಪಿ ಬಾಬಾನ ಪತ್ತೆಗಾಗಿ ದೆಹಲಿಗೆ ತೆರಳಿದ್ದ ಸಿಬಿ-ಸಿಐಡಿ ವಿಭಾಗದ ವಿಶೇಷ ಪೊಲೀಸರ ತಂಡವು ರಾಷ್ಟ್ರ ರಾಜಧಾನಿಯ ಘಾಜಿಯಾಬಾದ್ ನಲ್ಲಿ ಬಂಧಿಸಿದ್ದು, ಟ್ರಾನ್ಸಿಟ್ ರಿಮ್ಯಾಂಡ್ ಪಡೆದುಕೊಂಡ ನಂತರ ವಿಚಾರಣೆ ನಡೆಸಲು ಬಾಬಾನನ್ನು ಚೆನ್ನೈ ಗೆ ಕರೆ ತರಲಾಗುತ್ತಿದೆ.
ಹಲವು ವಿದ್ಯಾರ್ಥಿಗಳು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣಗಳು ದಾಖಲಾದ ನಂತರ ಸುಶಿಲ್ ಹರಿ ರೆಸಿಡೆನ್ಸಿಯಲ್ ಸ್ಕೂಲ್ ಸಂಸ್ಥಾಪಕ ಶಿವ ಶಂಕರ್ ಬಾಬಾ ನಗರದಿಂದ ಪರಾರಿಯಾಗಿ ಡೆಹ್ರಾಡೂನ್ ನಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಈ ವಿಚಾರವಾಗಿ ಮಾಹಿತಿ ಪಡೆದುಕೊಂಡಿದ್ದ ಪೊಲೀಸರ ತಂಡ, ಆತನ ಬಂಧನಕ್ಕಾಗಿ ಡೆಹ್ರಾಡೂನ್ ಗೆ ತೆರಳಿದರು. ಆಸ್ಪತ್ರೆಗೆ ದಾಖಲಾಗಲು ಸಹಕರಿಸಿದ್ದ ಮಹಿಳಾ ಭಕ್ತರೊಬ್ಬರ ಮನೆಯಲ್ಲಿ ಬಾಬಾ ಆಶ್ರಯ ಪಡೆದುಕೊಂಡಿದ್ದ ಮಹಿಳಾ ಭಕ್ತೆಯ ಮೊಬೈಲ್ ಸಂಖ್ಯೆಗೆ ಬರುವ ಕರೆಗಳ ಆಧರಿಸಿ ಸಿಬಿ -ಸಿಐಡಿ ತಂಡ ಆಕೆಯ ಮನೆಯಲ್ಲಿ ಬಾಬಾ ಅವರನ್ನು ಬಂಧಿಸಿದೆ.
ಬಾಬಾ ಬಂಧನವಾದ ಕೂಡಲೇ, ಮತ್ತೊಂದು ಪೊಲೀಸರ ತಂಡ ಚೆನ್ನೈನ ಇಸಿಆರ್ ಪ್ರದೇಶದಲ್ಲಿರುವ ಶಾಲೆಗೆ ಭೇಟಿ ನೀಡಿ ಶಾಲಾ ಸದಸ್ಯರನ್ನು ವಿಚಾರಣೆ ನಡೆಸಿದೆ. ಶಿವ ಶಂಕರ ಬಾಬಾ ವಿರುದ್ದ ಶಾಲೆಯ ಮಾಜಿ ವಿದ್ಯಾರ್ಥಿಗಳು ಲೈಂಗಿಕ ದುರುಪಯೋಗ, ಲೈಂಗಿಕ ಕಿರುಕುಳ, ದುರ್ನಡತೆಯ ಬಗ್ಗೆ ದೂರುಗಳನ್ನು ನೀಡಿದ್ದ ಹಿನ್ನಲೆಯಲ್ಲಿ ಮೂರು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.