ಚಿಕ್ಕಬಳ್ಳಾಪುರ: ಸ್ನೇಹಿತನ ಮದುವೆಗೆಂದು ಬಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಯುವಕನೋರ್ವ, ಲಾಡ್ಜ್ ನಿಂದ ಹೊರಬರುವಾಗ ಮೆಟ್ಟಿಲುಗಳ ಮೇಲೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಬೆಂಗಳೂರಿನ ಚಿಕ್ಕಜಾಲ ಶೆಟ್ಟಿ ಹಳ್ಳಿ ಗ್ರಾಮದ ಯುವಕ ಹರೀಶ್ ಮೃತ ವ್ಯಕ್ತಿ. ತಾಲೂಕಿನ ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದಲ್ಲಿ ಸ್ನೇಹಿತನ ಮದುವೆಗೆಂದು ನಿನ್ನೆ ಸ್ನೇಹಿತರೊಂದಿಗೆ ಬಂದಿದ್ದರು. ಅಂತೆಯೇ ರಾತ್ರಿ ಸ್ನೇಹಿತರೊಂದಿಗೆ ಮದ್ಯ ಸೇವನೆ ಮಾಡಿದ್ದನು.
ಬೆಳಗ್ಗೆ ಗೌರಿಬಿದನೂರು ನಗರದ ನಂಜುಂಡೇಶ್ವರ ಲಾಡ್ಜ್ ಗೆ ಬಂದು ರೂಮ್ ಪಡೆದಿದ್ದಾರೆ. 4 ಜನ ಸ್ನೇಹಿತರು ಮಲಗಿದ್ದ ಸಮಯದಲ್ಲಿ ಹರೀಶ್ ನೀರು ಕುಡಿಯಲು ತೂರಾಡಿಕೊಂಡು ಕೆಳಗೆ ಬಂದು ಲಾಡ್ಜ್ ನ ಮುಂಭಾಗದ ಮೆಟ್ಟಿಲ ಬಳಿ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾನೆ.
ಈ ದೃಶ್ಯ ಲಾಡ್ಜ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಕೂಡಲೇ ಹರೀಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ವೃತ್ತ ನಿರೀಕ್ಷಕ ಶಶಿಧರ್ ಹಾಗೂ ನಗರ ಠಾಣೆಯ ಪಿಎಸ್ಐ ಪ್ರಸನ್ನ ಕುಮಾರ್ ಭೇಟಿ ನೀಡಿ ಲಾಡ್ಜ್ ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಸಾವಿನ ಕಾರಣ ತಿಳಿದಿದೆ. ಘಟನೆ ಕುರಿತಂತೆ ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.