ಚಿಕ್ಕಬಳ್ಳಾಪುರ: ಇಬ್ಬರು ಗಂಡಂದಿರು ಮೃತಪಟ್ಟ ಬೆನ್ನಲ್ಲೇ ಪತ್ನಿ ಕೂಡ ನಿಗೂಢ ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮುಸಲ್ಮಾನರಹಳ್ಳಿ ನಿವಾಸಿ ಪರ್ವೀನ್ ಮುಬಾರಕ್(30) ಎನ್ನಲಾಗಿದೆ.
ಮೃತ ಪರ್ವೀನ್ ಮುಬಾರಕ್ಳನ್ನು, ಹತ್ತು ವರ್ಷಗಳ ಹಿಂದೆ ಬಾಗೇಪಲ್ಲಿ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಮೊದಲ ರಾತ್ರಿಯಂದೇ ಗಂಡನನ್ನು ಬಿಟ್ಟು ಶಿವಪ್ಪ ಎಂಬ ಪ್ರಿಯಕರನ ಜೊತೆ ಆಕೆ ಓಡಿ ಹೋಗಿದ್ದಳು. ಶಿವಪ್ಪನ ಜೊತೆ 10 ವರ್ಷ ಸಂಸಾರ ಮಾಡಿದ ನಂತರ ಆತ ಅನಾರೋಗ್ಯದಿಂದ ಮೃತಪಟ್ಟಿದ್ದ. ಶಿವಪ್ಪ ಹಾಗೂ ಪರ್ವೀನ್ಗೆ 8 ವರ್ಷದ ಓರ್ವ ಮಗನೂ ಇದ್ದಾನೆ.
ಆದರೆ, ಇತ್ತೀಚೆಗೆ ಪರ್ವೀನ್ ಪಕ್ಕದ ಗ್ರಾಮ ವಾಟದ ಹೊಸಹಳ್ಳಿ ಗ್ರಾಮದ ವಿನಯ್ ಜೊತೆ ಸಂಸಾರ ಶುರು ಮಾಡಿದ್ದಳು. ಆತ ಕೂಡ ವಾರದ ಹಿಂದೆ ರಸ್ತೆ ಅಪಘಾತದಲ್ಲಿ ಲಾರಿ ಕೆಳಗೆ ಸಿಲುಕಿ ಮೃತಪಟ್ಟಿದ್ದಾನೆ. ಅದಾದ ಬಳಿಕ ಪರ್ವೀನ್ ಕೂಡ ವಾಟದಹೊಸಹಳ್ಳಿ ಗ್ರಾಮದ ಹೊರಹೊಲಯದ ಪಾಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.