



ಚಿಕ್ಕಮಗಳೂರು: ರಸ್ತೆಯ ಇಳಿಜಾರಿನಲ್ಲಿ ಪ್ರಯಾಣಿಕನ ಪಾದರಕ್ಷೆ ಟಿಟಿ ವಾಹನದ ಚಾಲಕನ ಬಳಿ ಬಂದಿದ್ದು, ಚಾಲಕ ಪಾದರಕ್ಷೆಯನ್ನ ತೆಗೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಕಂದಕಕ್ಕೆ ಇಳಿದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ ಬಳಿ ನಡೆದಿದೆ.
ಸೋಮವಾರ ಬೆಂಗಳೂರಿನಿಂದ 13 ಜನ ಟಿಟಿ ವಾಹನ ಮಾಡಿಕೊಂಡು ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದರು. ಸಂಜೆ ಪ್ರವಾಸ ಮುಗಿಸಿಕೊಂಡು ಹೋಗುವಾಗ ಇಳಿಜಾರಿನಲ್ಲಿ ಹಿಂದೆ ಕೂತಿದ್ದ ಪ್ರಯಾಣಿಕನ ಪಾದರಕ್ಷೆ ಚಾಲಕನ ಕಾಲಿನ ಬಳಿ ಬಂದಿತ್ತು. ಪಾದರಕ್ಷೆ ಎಕ್ಸಲೇಟರ್ ಹಾಗೂ ಬ್ರೇಕ್ ಮಧ್ಯೆ ಸಿಲುಕಬಹುದು ಎಂದು ಅದನ್ನ ತೆಗೆಯಲು ಹೋದಾಗ ಗಾಡಿ ನ್ಯೂಟ್ರಲ್ ಗೇರಿಗೆ ಬಿದ್ದು ಗಾಡಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ 13 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಟಿಟಿ ಕಂದಕಕ್ಕೆ ಇಳಿದ ಪರಿಣಾಮ ಗಾಡಿಯ ಮುಂಭಾಗ ಸಣ್ಣ-ಪುಟ್ಟ ಡ್ಯಾಮೇಜ್ ಆಗಿದ್ದು, ಪ್ರಯಾಣಿಕರು ಸೇಫ್ ಆಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರೇನ್ ಮೂಲಕ ಟಿಟಿ ಗಾಡಿಯನ್ನ ಕಂದಕದಿಂದ ಮೇಲಕ್ಕೆ ಎತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಟಿ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಪ್ರವಾಸಿ ಮಿತ್ರರ ತಂಡ ಸ್ಥಳಕ್ಕೆ ಭೇಟಿ ನೀಡಿ ಟಿಟಿಯಲ್ಲಿದ್ದವರನ್ನ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.








