ಮಂಗಳೂರು: ಮಂಗಳೂರಿನ ಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ವೇಳೆ ಮಾತನಾಡಿದ ಶಾಸಕ ಯು.ಟಿ ಖಾದರ್ ಬಿಜೆಪಿ ಸರಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಲ ಕಳೆಯುತ್ತಿದೆ. ಒಂದೇ ಒಂದು ಯೋಜನೆಗಳನ್ನು ಜಿಲ್ಲೆಗೆ ತರುತ್ತಿಲ್ಲ. ಇರುವ ಕಚೇರಿ, ಸೌಲಭ್ಯಗಳ ಸ್ಥಳಾಂತರ, ಖಾಸಗೀಕರಣ ಮಾಡುವಲ್ಲಿ ನಿರತವಾಗಿದೆ. ಭಾವನಾತ್ಮಕ ವಿಚಾರಗಳಿಂದ ಜನರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದೆ ಎಂದು ಕಿಡಿಕಾರಿದರು.
ಜಿಎಸ್ ಟಿ, ನೋಟು ಅಮಾನ್ಯೀಕರಣ ನಿಲುವುನಿಂದಾಗಿ ಈಗಾಗಲೇ ಜನರಿಗೆ ಅನ್ಯಾಯ ಆಗಿದೆ. ಈಗ ಐಟಿ ಕಚೇರಿ ಸ್ಥಳಾಂತರವು ನಾಲ್ಕು ಲಕ್ಷ ತೆರಿಗೆದಾರರಿಗೆ ಭಾರೀ ದೊಡ್ಡ ಆಘಾತ ನೀಡಿದೆ. ಸಂಸದರು ತಾನು ನಂಬರ್ ವನ್ ಹೇಳುತ್ತಾರೆ. ಆದರೆ ತನ್ನ ಸ್ವಂತ ನೆಲದಲ್ಲಿರುವ ಕಚೇರಿ ಸ್ಥಳಾಂತರವಾಗುತ್ತಿದ್ದರೂ ಧ್ವನಿ ಎತ್ತುತ್ತಿಲ್ಲ. ಸಂಸದರು ರಾಜೀನಾಮೆ ನೀಡಬೇಕು. ಐಟಿ ಕಚೇರಿ ಸ್ಥಳಾಂತರವನ್ನು ತತ್ ಕ್ಷಣ ಹಿಂಪಡೆಯಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಐವನ್ ಡಿಸೋಜ, ಜೆ ಅರ್ ಲೋಬೊ, ಮಾಜಿ ಸಚಿವ ಅಭಯಚಂದ್ರ ಜೈನ್, ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.