


ರಾಮನಗರ: ಬೆಟ್ಟದಿಂದ ಪ್ರೇಮಿಗಳಿಬ್ಬರೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ನಡೆದಿದೆ. ಸತೀಶ್ (24) ಹಾಗೂ ಚಂದನಾ (20) ಆತ್ಮಹತ್ಯೆಗೆ ಶರಣಾದವರು. ಸೊಂಟಕ್ಕೆ ವೇಲ್ ಸುತ್ತಿಕೊಂಡು ಪ್ರೇಮಿಗಳಿಬ್ಬರೂ ಬೆಟ್ಟದಿಂದ ಜಿಗಿದು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉರುಗಮ್ ಮೂಲದವರಾಗಿರುವ ಸತೀಶ್ ಹಾಗೂ ಚಂದನಾ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಸತೀಶ್ ತಮಿಳುನಾಡಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ ಇವರಿಬ್ಬರ ವಿವಾಹಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. ಒಂದು ವರ್ಷದ ಹಿಂದೆ ಚಂದನಾಳನ್ನು ಕನಕಪುರಕ್ಕೆ ಮದುವೆ ಮಾಡಿಕೊಡಲಾಗಿತ್ತು. ಸೆ.22ರಿಂದ ಚಂದನಾ ಪತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಸತೀಶ್ ಹಾಗೂ ಚಂದನಾ ಇಬ್ಬರೂ ಕಬ್ಬಾಳು ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










