ದಾವಣಗೆರೆ: ಕಳೆದ 9 ತಿಂಗಳ ಹಿಂದೆ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿನ ವೈದ್ಯ ಪತಿಯೇ ಹೈಡೋಸ್ ಇಂಜೆಕ್ಷನ್ ನೀಡಿ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆ ಶಿಲ್ಪಾ(36) ಎನ್ನಲಾಗಿದೆ.
ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಶಿಲ್ಪ ಎಂಬುವವರನ್ನು ಮದುವೆ ಮಾಡಿಕೊಂಡಿದ್ದ ಡಾ. ಚನ್ನೇಶಪ್ಪ, ರಾಮೇಶ್ವರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಡಾ.ಚನ್ನೇಶಪ್ಪ ಕುಡಿತ ಮತ್ತು ಜೂಜಿನ ದಾಸನಾಗಿದ್ದು, ವೈದ್ಯನಾಗಿ ವಾಮಾಚಾರದಲ್ಲಿಯೂ ನಂಬಿಕೆ ಹೊಂದಿದ್ದ.
ಪತ್ನಿಯನ್ನು ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಡಾ. ಚನ್ನೇಶಪ್ಪ, ಶಿಲ್ಪಾಗೆ ಲೋ ಬಿಪಿಯಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಇದಾದ ಬಳಿಕ ಮಾರ್ಗ ಮಧ್ಯೆ ನಿಮ್ಮ ಮಗಳು ತೀರಿಕೊಂಡಿದ್ದಾಳೆ ಎಂದು ಶಿಲ್ಪಾ ಪೋಷಕರಿಗೆ ತಿಳಿಸಿದ್ದಾನೆ.
ಡಾ. ಚನ್ನೇಶಪ್ಪ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ ಮನೆಗೆ ತಂದಿದ್ದ. ಅಲ್ಲದೇ ಶಿಲ್ಪಾಳ ಎಡ ಭುಜದ ಮೇಲೆ ಸೂಜಿಯಿಂದ ಚುಚ್ಚಿದ ಗುರುತುಗಳು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಅನುಮಾನಗೊಂಡಿದ್ದ ಪೋಷಕರು, ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರುತ್ತಲೇ ದೇಹದಲ್ಲಿನ ಗುರುತುಗಳ ಬಗ್ಗೆ ಎಫ್ಎಸ್ಎಲ್ಗೂ ಕಳಿಸಿದ್ದ ಪೊಲೀಸರು.ಇವೆರಡೂ ವರದಿ ಮ್ಯಾಚ್ ಆಗಿದ್ದ ಕಾರಣ ಇದು ಕೊಲೆ ಪ್ರಕರಣ ಎಂಬುವುದು ಬೆಳಕಿಗೆ ಬಂದಿದೆ.