



35 ವರ್ಷಗಳಿಂದ ಥರಾವರಿ ಖಾಯಿಲೆಗಳೊಂದಿಗೆ ಹೋರಾಡಿ ಸ್ಟೈರ್ಯದ ಬದುಕು ನಡೆಸುತ್ತಿದ್ದ ಸುಳ್ಯದ ಚಾಂದಿನಿ ನಿಧನರಾಗಿದ್ದಾರೆ.ಸುಳ್ಯದ ನಾವೂರು ನಿವಾಸಿ ದಿ. ಧನಂಜಯ ಮತ್ತು ಸರೋಜಿನಿ ದಂಪತಿಯ ಪುತ್ರಿಯಾದ ಚಾಂದಿನಿ ಕಿತ್ತು ತಿನ್ನುವ ಅನಾರೋಗ್ಯ, ನೋವು ಕೊಡುವ ಖಾಯಿಲೆ, ಇಪ್ಪತ್ತಕ್ಕೂ ಅಧಿಕ ಬಾರಿ ವಿಧ ವಿಧದ ಶಸ್ತ್ರಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೇಟ್ಮೆಂಟ್, ಕಿಮೋಥೆರಪಿ, ನಿರಂತರ ಪ್ರಖರ ಪರಿಣಾಮದ ಔಷಧಿ ಸೇವನೆ… ಇಂಥ ಸವಾಲಿನ ಬದುಕು ನಡೆಸಿದ್ದರು. ಆದರೂ ಧೃತಿಗೆಡದೆ ನಾಳೆ ಇದೆ ಎಂಬ ನಿರೀಕ್ಷೆಯಿಂದಲೇ ಬದುಕುತ್ತಿದ್ದರು.ಆದರೆ ಚಿಕಿತ್ಸೆಗಾಗಿ ಲಕ್ಷ ಲಕ್ಷ ವ್ಯಯಿಸಿದರೂ ಆರೋಗ್ಯಕರ ಬದುಕು ಸಾಧ್ಯವಿರಲಿಲ್ಲ.
ಸರಕಾರದ ಕದ ತಟ್ಟಿ ಉಚಿತ ಚಿಕಿತ್ಸೆಯ ಭರವಸೆಯನ್ನು ಪಡೆದರೂ ಅದರ ಅನುಷ್ಠಾನದ ಹಾದಿಯಲ್ಲಿ ಹಲವು ಸವಾಲುಗಳಿತ್ತು. ಆರ್ಥಿಕ ನೆರವಿನ ದಾರಿಯೂ ಮಸುಕಾದಾಗ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದರು.ಮಂಗಳೂರು ಆಸ್ಪತ್ರೆಯಲ್ಲೇ ಇದ್ದ ಚಾಂದಿನಿ ಅಲ್ಲಿ ನಿಧನರಾಗಿದ್ದಾರೆ.ಮೃತರು ಪತಿ ತಾಯಿ ಸರೋಜಿನಿ, ಪತಿ ಪುರುಷೋತ್ತಮ್, ಪುತ್ರಿ ಚಾನ್ವಿ ಅವರನ್ನು ಅಗಲಿದ್ದಾರೆ.ಚಾಂದಿನಿ ಅವರ ಮೃತದೇಹವನ್ನು ಸುಳ್ಯದ ನಾವೂರು ಮನೆಗೆ ತರಲಾಗಿದ್ದು, ಬೆಳಿಗ್ಗೆ 10 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇದೆ. ಆ ಬಳಿಕ ಬಂದಡ್ಕದಲ್ಲಿರುವ ಪತಿಯ ಮನೆಗೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.








