


ನವದೆಹಲಿ:ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋದ ತಕ್ಷಣವೇ ವ್ಯಕ್ತಿಯೊಬ್ಬನ ಭಾರತೀಯ ಪೌರತ್ವ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ. ಚುನಾವಣಾ ಆಯೋಗವು ನಡೆಸುವ ವಿಶೇಷ ತೀವ್ರ ಮರುಪರಿಶೀಲನೆ ಪ್ರಕ್ರಿಯೆಯ ಕುರಿತಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು, “ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ನಿರ್ವಹಿಸುವ ಸಂಪೂರ್ಣ ಅಧಿಕಾರವಿದೆ. ಆದರೆ, ಕೇವಲ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯ ಪೌರತ್ವ ಇಲ್ಲದಂತಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಯಾರದ್ದಾದರೂ ಪೌರತ್ವದ ಬಗ್ಗೆ ಗಂಭೀರವಾದ ಸಂಶಯಗಳು ಎದುರಾದರೆ, ಚುನಾವಣಾ ಆಯೋಗವು ಆ ಪ್ರಕರಣವನ್ನು ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯ (ಗೃಹ ಸಚಿವಾಲಯ) ಪರಿಶೀಲನೆಗೆ ರವಾನಿಸಬೇಕಾಗುತ್ತದೆ. ಅಂತಿಮವಾಗಿ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇರುವುದು ಕಾನೂನುಬದ್ಧ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಹೊರತು, ಚುನಾವಣಾ ಆಯೋಗಕ್ಕಲ್ಲ” ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕೇಂದ್ರ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳು ಹಾಗೂ ಪಡಿತರ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಜನರಿಗೆ ಸುಪ್ರೀಂ ಕೋರ್ಟ್ ನ ಈ ಮಹತ್ವದ ತೀರ್ಪು ದೊಡ್ಡ ರಿಲೀಫ್ ನೀಡಿದಂತಾಗಿದೆ.








