ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ (ಡಿ.10) ಆರಂಭಗೊಳ್ಳಲಿದೆ . ಐದು ದಿನಗಳ ಮಹೋತ್ಸವದಲ್ಲಿ ಪ್ರತಿದಿನ ರಾತ್ರಿ ವಿಶೇಷ ಪ್ರದಕ್ಷಿಣೆಗಳ ವೈಶಿಷ್ಟ್ಯಪೂರ್ಣ ಬಲಿ ಉತ್ಸವವನ್ನು ಕಾಣಬಹುದು.
ಮೊದಲನೆಯ ದಿನ (ಡಿ .10 ) ಹೊಸಕಟ್ಟೆ ಉತ್ಸವ; ಎರಡನೆಯ ದಿನ ಕೆರೆಕಟ್ಟೆ ಉತ್ಸವ (ಡಿ,11 ) ;ಮೂರನೆಯ ದಿನ ಲಲಿತೋದ್ಯಾನ ಉತ್ಸವ (ಡಿ .12 ), ನಾಲ್ಕನೆಯ ದಿನ ಕಂಚಿಮಾರು ಕಟ್ಟೆ ಉತ್ಸವ(ಡಿ .13 ) ,ಐದನೆಯ ದಿನ ಗೌರಿಮಾರುಕಟ್ಟೆ ಉತ್ಸವ (ಡಿ 14 );ಗಳು ಪ್ರಸಿದ್ಧವಾಗಿವೆ . ಈ ಸಂದರ್ಭ ವಿದ್ವಾನ್ಸರಿಂದ ವೇದ ,ಪುರಾಣ,ಸಂಗೀತ ,ವಿಚಾರ ,ಅಷ್ಟಾವಧಾನ ಸೇವೇಗಳು ನಡೆಯುತ್ತವೆ . ಉತ್ಸವದ ಕೊನೆಯ ದಿನ ಧರ್ಮಸ್ಥಳ ಕ್ಷೇತ್ರ ದೀಪಾಲಂಕಾರದಲ್ಲಿ ಮಿಂದೇಳುತ್ತದೆ.
ಭಕ್ತಿ ಭಜನೆಯ ಪಾದಯಾತ್ರೆ : ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಕ್ತರ ಭಕ್ತಿ ಭಜನೆಯ 8 ನೇ ವರ್ಷದ ಪಾದಯಾತ್ರೆ ಇಂದು(ಡಿ.10) ಮದ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರಿಂದ ದೀಪ ಪ್ರಜ್ವಲನೆಯ ಮೂಲಕ ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ಬೆಳ್ತಂಗಡಿ ತಾಲೂಕಿನ ಭಕ್ತರು,ಸ್ವಸಹಾಯ ಸಂಘದ ಕಾರ್ಯಕರ್ತರು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ,ಭಜನಾ ಮಂಡಳಿಯ ಸದಸ್ಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿ ಭಜನೆಯೊಂದಿಗೆ ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆದು. ಧರ್ಮಾಧಿಕಾರಿ ಡಾ! ಡಿ .ವೀರೇಂದ್ರ ಹೆಗ್ಗಡೆಯವರನ್ನು ಭೇಟಿಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಡಾ.ಹೆಗ್ಗಡೆಯವರು ಆಶೀರ್ವಚನ ನೀಡಲಿದ್ದಾರೆ.
ವಸ್ತುಪ್ರದರ್ಶನ ,ವ್ಯಾಪಾರ ಮಳಿಗೆಗಳು : ಈ ಬಾರಿ ಕೋರೋನ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಇರುವುದಿಲ್ಲ . ವ್ಯಾಪಾರ ಮಳಿಗೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಶ್ರೀ ಮಂಜುನಾಥ ಸ್ವಾಮಿಯ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ವಿದ್ಯುಕ್ತವಾಗಿ ನಡೆಯಲಿದೆ.
ಧರ್ಮಸ್ಥಳ ಪುಣ್ಯಭೂಮಿ ಲಕ್ಷ ದೀಪಗಳ ಪ್ರಾಜ್ವಲ್ಯಮಾನ ಬೆಳಕಿನಲ್ಲಿ ಲೋಕದ ಅಜ್ಞಾನಾಂಧಕಾರವನ್ನು ಕಳೆದು ಸುಜ್ಞಾನ ಜ್ಯೋತಿಯನ್ನು ಎಲ್ಲೆಡೆ ಪಸರಿಸಲಿದೆ. ಕ್ಷೇತ್ರದ ನೇತ್ರಾವತಿ ಪುಣ್ಯ ನದಿಯಲ್ಲಿ ಮಿಂದು ಸಕಲ ಪಾಪಕರ್ಮಗಳನ್ನು ಕಳೆದು ಮಂಜುನಾಥನ ದಿವ್ಯ ಸನ್ನಿಧಿಯಲ್ಲಿ ಸರ್ವವನ್ನು ಸಮರ್ಪಿಸಿ ಧನ್ಯತಾಭಾವ ಹೊಂದುವ ಅಪೂರ್ವ ಸುಸಂದರ್ಭವಿದು . ಭಕ್ತರ ಬದುಕಿನ ಕತ್ತಲನ್ನು ಕಳೆದು ಬೆಳಕಿನ ಸುಜ್ಞಾನ ಜ್ಯೋತಿಯ ಪುಣ್ಯ ಪ್ರಸಾದದಿಂದ ಜನ್ಮ ಸಾರ್ಥಕವಾಯ್ತೆಂಬ ಭಾವನೆ ಮೂಡಿಬರುತ್ತದೆ.