ಧರ್ಮಸ್ಥಳ: ಆನಂದ್ ನಾಯ್ಕ್ ಎಂಬಾತನಿಗೆ ಮೂರು ಮಕ್ಕಳಿರುವ ಸುಂದರ ಸಂಸಾರ ಇತ್ತು. ಆದ್ರೆ ಆತನಿಗೆ ಇನ್ನೊಂದು ಯುವತಿಯ ಜೊತೆಗೆ ಪ್ರೇಮಾಂಕುರ ಆಗಿತ್ತು. ಆಕೆಗೋ ಈತನಿಗೆ ಹೆಂಡತಿ ಮಕ್ಕಳು ಇದ್ದರೂ ಸಹ ಆತನೊಂದಿಗೆ ಸಂಸಾರ ಕಟ್ಟಿಕೊಳ್ಳುವ ಆಸೆಯಿತ್ತು. ಮನೆಯವರು ಈ ಪ್ರೀತಿಗೆ ಒಪ್ಪಿಗೆ ಸೂಚಿಸಿರಲಿಲ್ಲ. ಸುರೇಶ್ ನಾಯ್ಕ್ ಎಂಬಾತನೊಂದಿಗೆ ವಿವಾಹ ನಿಶ್ಚಯ ಮಾಡಿದ್ದರು…! ಈ ಹುಚ್ಚು ಪ್ರೇಮಕ್ಕೆ ಬಲಿಯಾಗಿದ್ದು ಮಾತ್ರ ಅಮಾಯಕ ಯುವಕ..!
4 ವರ್ಷಗಳ ಹಿಂದೆ ನಡುರಸ್ತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ದರ್ಶನ ಪಾತ್ರಿ ಆನಂದ ನಾಯ್ಕ ಹಾಗೂ ಆತನ 5 ಸ್ನೇಹಿತರು ನಡೆಸಿದ ಈ ಕೃತ್ಯ ಜಿಲ್ಲೆಯ ಜನತೆಯನ್ನೇ ಬೆಚ್ಚಿಬೀಳಿಸಿತ್ತು. ದರ್ಶನ ಪಾತ್ರಿ ಆನಂದ ನಾಯ್ಕ ಹಾಗೂ ಆತನ 5 ಸ್ನೇಹಿತರು ಅಮಾಯಕ ಯುವಕ ಸುರೇಶ್ ನಾಯ್ಕ ಎಂಬವರನ್ನು ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಅಮಾನುಷವಾಗಿ ಕೊಲೆಗೈದಿದ್ದಾರೆ. ಬಳಿಕ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಧರ್ಮಸ್ಥಳ ಸಮೀಪದ ಪಟ್ರಮೆ ರಸ್ತೆಯಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ಇದು ನಡೆದಿದ್ದು 2017 ನೇ ಎ.30 ರಂದು..!
ಇದೀಗ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ದಾಲಿಸಲಾಗಿದ್ದ ಆರೋಪ ಸಾಬೀತುಗೊಂಡಿದೆ ಹಾಗೂ ಜು.28ರಂದು ಅಪರಾಧಿಗಳಿಗೆ ಶಿಕ್ಷೆಯ ತೀರ್ಪು ಪ್ರಕಟವಾಗಲಿದೆ.
ಅಳದಂಗಡಿ ನಾವರ ಗ್ರಾಮದ ಧರ್ಮಗುಡಿ ಶ್ರೀ ಆದಿಶಕ್ತಿ ಮಹಾಮ್ಮಾಯಿ ದೇವಸ್ಥಾನದ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದ ದರ್ಶನ ಪಾತ್ರಿ ಆನಂದ ನಾಯ್ಕ (35), ಅವರ ಸಂಗಡಿಗರಾದ, ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಚಾರ್ಮಾಡಿ ಮಾರಿಗುಡಿ ಬಳಿ ನಿವಾಸಿ ವಿನಯ್ (30), ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಪ್ರವೀಣ್ ನಾಯ್ಕ (35), ಬಂಟ್ವಾಳ ತಾಲೂಕು ಪುದು ಗ್ರಾಮದ ಕೊಡ್ಮಣ್ ಕಾಪಿಕಾಡ್ ನಿವಾಸಿ ಲೋಕೇಶ (34), ಮೂಡುಕೋಡಿ ಗ್ರಾಮದ ಪ್ರಕಾಶ್ (31) ಮತ್ತು ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲ ನಾಗರಾಜ ಮೂಲ್ಯ (39) ಎಂಬವರೇ ಪ್ರಕರಣದ ಪ್ರಮುಖ ಆರೋಪಿಗಳು.