ಧರ್ಮಸ್ಥಳ: ರಾಜ್ಯದ 23 ಜಿಲ್ಲೆಗಳಲ್ಲಿ ತಮ್ಮದೇ ಊರುಗಳಲ್ಲಿ ಗುರುವಾರ 121 ಜೋಡಿಗಳು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ಡಿ. ವೀರೇಂದ್ರ ಹೆಗ್ಗಡೆ ಆಯೋಜಿಸಿದ ವಿವಾಹ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿದು ಕಂಕಣಬದ್ಧರಾಗಿದ್ದಾರೆ.
ಈ ಕುರಿತು ವಿವರಗಳನ್ನು ನೀಡಿದ ಡಾ.ಹೆಗ್ಗಡೆ, ಕೊರೋನಾ ಕಾರಣದಿಂದಾಗಿ ಈ ಬಾರಿ ಧರ್ಮಸ್ಥಳದಲ್ಲಿ ಏ.29 ರಂದು ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯಾ ಜೋಡಿಗಳ ಒಪ್ಪಿಗೆಯಂತೆ ಅವರವರ ಊರುಗಳಲ್ಲಿಯೇ ನೆರವೇರಿಸಲಾಯಿತು ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂರಾರು ಜೋಡಿಗಳು ಸಂಭ್ರಮದಿಂದ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ವಿವಾಹವಾಗುತ್ತಿದ್ದರು. ಆದರೆ ಈಗ ಈ ಬದಲಾದ ಪರಿಸ್ಥಿತಿಯಿಂದಾಗಿ ಅವರವರ ಊರಗಳಲ್ಲೇ ನಡೆಯಿತು. ಆದರೆ ಒಂದು ಜೋಡಿ ಮಾತ್ರ ಗುರುವಾರ ಬೆಳಗ್ಗೆ 8.55ಕ್ಕೆ ಸರಿಯಾಗಿ ದೇವಳದ ಮುಂಭಾಗದಲ್ಲಿ ವಿವಾಹ ಮಾಡಿಕೊಂಡರು.
ನೋಂದಾಯಿತ ಪ್ರತಿಯೊಂದು ಜೋಡಿಗೂ ತಾಳಿ ಸಹಿತ ಮಂಗಳಸೂತ್ರ, ಸೀರೆ, ದೋತಿ, ಶಲ್ಯ ಉಡುಗೊರೆಗಳನ್ನು ನೀಡಲಾಗಿತ್ತು. ಅಲ್ಲದೆ ನೂತನ ದಂಪತಿಗಳಿಗೆ ವಿವಾಹದ ಖರ್ಚನ್ನು ನಿಭಾಯಿಸಲು ತಲಾ 10,000 ರುಪಾಯಿಯನ್ನು ಧರ್ಮಸ್ಥಳದಿಂದ ಒದಗಿಸಲಾಗಿದೆ.