




ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಹತ್ವದ ಬೆಳವಣಿಗೆ ನಡೆದಿದ್ದು, ಎಸ್ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಕೆಲ ಭಾಗಗಳ ಪ್ರತಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ಅವರ ಕೈ ಸೇರಿದೆ.
ಎಸ್ಐಟಿ ಒಟ್ಟು 3,923 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರೊಳಗಿನ ಸುಮಾರು 1,100 ಪುಟಗಳ ಪ್ರತಿಯನ್ನು ನ್ಯಾಯಾಲಯವು ಜಯಂತ್ ಟಿ. ಅವರಿಗೆ ನೀಡಿದೆ ಎನ್ನಲಾಗಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ನವೆಂಬರ್ 20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುವಂತೆ ಕೋರಲಾಗಿತ್ತು. ಜೊತೆಗೆ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯವನ್ನು ಎಸ್ಐಟಿ ವಿನಂತಿಸಿತ್ತು.
ಎಸ್ಐಟಿ ವರದಿ ಪ್ರತಿಯನ್ನು ಪಡೆಯಲು ಜಯಂತ್ ಟಿ. ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಎಸ್ಐಟಿ ಕೋರಿಕೆಯ ಹಿನ್ನೆಲೆಯಲ್ಲಿ ಆರಂಭದಲ್ಲಿ ನ್ಯಾಯಾಲಯ ವರದಿ ನೀಡಲು ನಿರಾಕರಿಸಿತ್ತು. ನಂತರ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದ ಮಂಡಿಸಿದ್ದರು. ಈ ವಾದದ ಬಳಿಕ ನ್ಯಾಯಾಲಯವು ಎಸ್ಐಟಿ ವರದಿಯ ಕೆಲವು ಭಾಗಗಳ ಪ್ರತಿಯನ್ನು ನೀಡಲು ಸಮ್ಮತಿ ಸೂಚಿಸಿತು.
ಅದರಂತೆ ಶುಕ್ರವಾರ ನ್ಯಾಯಾಲಯವು ಜಯಂತ್ ಟಿ. ಅವರಿಗೆ ವರದಿಯ ಕೆಲ ಭಾಗಗಳನ್ನು ಹಸ್ತಾಂತರಿಸಿದೆ. ಲಭ್ಯ ಮಾಹಿತಿಯಂತೆ, ನ್ಯಾಯಾಲಯ ನೀಡಿರುವ ಪ್ರತಿಯಲ್ಲಿ ಜಯಂತ್ ಟಿ. ಹಾಗೂ ಇತರರ ಹೇಳಿಕೆಗಳಷ್ಟೇ ಒಳಗೊಂಡಿದ್ದು, ಚಿನ್ನಯ್ಯ ಅವರು ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆ ಹಾಗೂ ಎಸ್ಐಟಿ ವರದಿಯಲ್ಲಿರುವ ಇತರ ಮಹತ್ವದ ಅಂಶಗಳನ್ನು ನೀಡಿಲ್ಲ ಎಂದು ತಿಳಿದುಬಂದಿದೆ.








