ಬೆಂಗಳೂರು :ಕರ್ನಾಟಕದ ಶಾಲೆಗಳಿಗೆ ಈಗಾಗಲೇ ದಸರಾ ರಜೆಯನ್ನು ನೀಡಲಾಗಿದೆ. ನವರಾತ್ರಿಯ ಆಚರಣೆ ನಡೆಯುತ್ತಿದೆ. ಅಕ್ಟೋಬರ್ 24 ರಂದು ವಿಜಯದಶಮಿ ಆಚರಿಸಲಾಗುತ್ತಿದ್ದು, ಹಬ್ಬದ ಮರುದಿನ ಅಕ್ಟೋಬರ್ 25 ರಂದು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಹಬ್ಬದ ಮರುದಿನ ಶಾಲಾರಂಭ ಮಾಡುವುದು ಮಕ್ಕಳ ಮೇಲೆ ಒತ್ತಡ ಹೆಚ್ಚಲಿದೆ ಅನ್ನೋ ಆತಂಕ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಈ ಬಾರಿ 15 ದಿನಗಳ ಕಾಲ ದಸರಾ ರಜೆ ಘೋಷಣೆ ಮಾಡಿದೆ. ಆದರೆ ಈ ಹಿಂದೆ ನೀಡಲಾಗುತ್ತಿರುವ ರಜೆಗೆ ಹೋಲಿಕೆ ಮಾಡಿದರೆ ಈ ಬಾರಿಯೂ ರಜೆ ಕಡಿತವಾಗಿದೆ. ಇದು ರಾಜ್ಯದ ಶಿಕ್ಷಕರ ಅತೃಪ್ತಿಗೆ ಕಾರಣವಾಗಿದ್ದು, ಇದೀಗ ಅಕ್ಟೋಬರ್ 30ರ ವರೆಗೆ ದಸರಾ ವಿಸ್ತರಣೆ ಮಾಡುವಂತೆ ಶಿಕ್ಷಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ದಸರಾ ರಜೆ ಒಂದು ತಿಂಗಳು ಇದ್ದು, ಈಗ ಕೇವಲ 15 ದಿನಕ್ಕೆ ಇಳಿಕೆಯಾಗಿದೆ. ಶಾಲೆಗಳಿಗೆ ದಸರಾ ರಜೆಯನ್ನು ಕಡಿತ ಮಾಡುವುದು ಸರಿಯಲ್ಲ ಅನ್ನೋದು ಶಿಕ್ಷಕರ ವಾದ.
ಕಳೆದ ವರ್ಷ ರಜೆ ವಿಸ್ತರಣೆ ಕುರಿತು ಶಿಕ್ಷಣ ಇಲಾಖೆ ಶಿಕ್ಷಕರ ಸಂಘಕ್ಕೆ ಮೌಖಿಕವಾಗಿ ತಿಳಿಸಿದ್ದರೂ ಈ ವರ್ಷ ರಜೆ ಅವಧಿ ವಿಸ್ತರಣೆ ಮಾಡಿಲ್ಲ. ಜೊತೆಗೆ ಶಿಕ್ಷಕರ ರಜೆಯನ್ನು ಮೊಟಕುಗೊಳಿಸಲಾಗಿದೆ ಅನೋ ಆರೋಪವೂ ಇದೆ.ದಸರಾ ಹಾಗೂ ಬೇಸಿಗೆ ರಜೆ ಕಾರಣದಿಂದಲೇ ಗಳಿಕೆ ರಜೆ ಕಡಿಮೆ ಇದೆ. ಹೀಗಾಗಿ ದಸರಾ ರಜೆ ಕಡಿತ ಮಾಡದಂತೆ ಸರಕಾರಕ್ಕೆ ಒತ್ತಡ ಹೇರಿದ್ದಾರೆ.