


ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
19 ವರ್ಷದ ಬನಸಿರಿ ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಬಿಇ ಮೂರನೇ ಸೆಮಿಸ್ಟರ್ ನ ಐಎಸ್ ವಿಭಾಗದಲ್ಲಿ ಓದುತ್ತಿದ್ದ ಬನಸಿರಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಡಿವೈಎಸ್ ಪಿ ಚಂದ್ರಶೇಖರ್, ತಿಲಕ್ ಪಾರ್ಕ್ ಸರ್ಕಲ್ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪರೀಕ್ಷೆಯಲ್ಲಿ ಕೆಲ ಸಬ್ಜೆಕ್ಟ್ಗಳು ಬ್ಯಾಕ್ ಉಳಿದ ಕಾರಣ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿನಿ ಬನಸಿರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದವರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಶಿವಪುರ ಗ್ರಾಮದ ಯುವತಿ ಬನಸಿರಿ ಟೆಲಿಕಾಂ ಇಂಜಿನಿಯರಿಂಗ್ ಮಾಡುತ್ತಿದ್ದಳು. ಎರಡನೇ ಸೆಮಿಸ್ಟರ್ನಲ್ಲಿ ಹೆಚ್ಚು ಸಬ್ಜೆಕ್ಟ್ ಗಳು ಬ್ಯಾಕ್ ಆಗಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇಂಜಿನಿಯರಿಂಗ್ ಬಿಟ್ಟು ಡಿಗ್ರಿಗೆ ಸೇರಬೇಕು ಎಂದುಕೊಂಡಿದ್ದಳಂತೆ. ಕಾಲೇಜಿನ ಗರ್ಲ್ಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ತಂಗಿದ್ದಳು. ಮಧ್ಯಾಹ್ನ ಊಟ ಮುಗಿಸಿಕೊಂಡು ಬಂದ ಬಳಿಕ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.