ವಿಟ್ಲ: ಕಳೆದ ಹಲವಾರು ದಿನಗಳಿಂದ ಅಡ್ಯನಡ್ಕ ಪೆರುವಾಯಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ಇಲ್ಲಿ ಗಡಿನಾಡ ಕೇರಳ ಭಾಗದವರು ಲಸಿಕೆ ಪಡೆದಿದ್ದರು. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಒಂದಷ್ಟೂ ಗಡಿನಾಡ ಮಂದಿಯೂ ಆಗಮಿಸಿ ವ್ಯಾಕ್ಸಿನ್ ಪಡೆದಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಅವರು ಈ ಲಸಿಕಾ ಯೋಜನೆ ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಸಂಸದರು ಗಡಿನಾಡ ಆರೋಗ್ಯ ಕೇಂದ್ರದಲ್ಲಿ ಕೇರಳದವರಿಗೆ ಲಸಿಕೆ ಕೊಡಬಾರದು ಎಂಬ ಸುಳ್ಳು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದು ಇದನ್ನು ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದಾರೆ.
ಗಡಿನಾಡಿನ ಆರೋಗ್ಯ ಕೇಂದ್ರದಲ್ಲಿ ಕೇರಳ ಭಾಗದವರಿಗೆ ಲಸಿಕೆ ಕೊಡಬಾರದು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾ ಆರೋಗ್ಯ ನಿರೀಕ್ಷಕರಿಗೆ, ತಾಲೂಕು ಆರೋಗ್ಯ ನಿರೀಕ್ಷಕರಿಗೆ ಮನವಿ ಮಾಡಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿಯಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ. ಸಂಸದರ ಹಸ್ತಕ್ಷೇಪವಿಲ್ಲ. ಈ ಸುಳ್ಳು ಸುದ್ದಿಯನ್ನು ಪಸರಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಟ್ಲ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ, ವಿಟ್ಲ ಮಹಾಶಕ್ತಿ ಕೇಂದ್ರ ಮತ್ತು ಪುಣಚ ಮಹಾಶಕ್ತಿ ಕೇಂದ್ರ ಆಗ್ರಹಿಸಿದೆ. ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾಗಾರಾಜ್ ಹೆಚ್ ಇ ಅವರಿಗೆ ದೂರನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದರು.
ಮನವಿ ಸಲ್ಲಿಸುವ ವೇಳೆ ವಿಟ್ಲ ಪಟ್ಟಣ ಪಂಚಾಯತ್ನ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಹರಿಪ್ರಸಾದ್ ಯಾದವ್, ಮೋಹನ್, ರಾಮ್ದಾಸ್ ಶೆಣೈ, ಜಗದೀಶ್ ಉಪಸ್ಥಿತರಿದ್ದರು.