ವಿಟ್ಲ: ಕೇಪು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಅಮ್ಮನವರ ಸನ್ನಿಧಿಯಲ್ಲಿ ನಡೆಯುವ ಕಾಲಾವಧಿ “ಕಜಂಬು ಜಾತ್ರೆ” ಡಿ.16ರಂದು ಆನುವಂಶಿಕ ಮೊಕ್ತೇಸರರಾದ ವಿಟ್ಲ ಅರಮನೆಯ ಬಂಗಾರು ಅರಸರ ಮುಂದಾಳುತ್ವದಲ್ಲಿ ನಡೆಯಿತು.
ಕೋವಿಡ್-19 ಹಿನ್ನಲೆಯಲ್ಲಿ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯಕ್ರಮಗಳು ನಡೆಯಿತು. ಡಿ.15ರ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು. ಡಿ.16ರಂದು ಕಜಂಬು ಉತ್ಸವ ನಡೆಯಿತು.ಸಂಜೆ ಹೊತ್ತಿಗೆ ಅನ್ನಪ್ರಸಾದದ “ಪಲ್ಲ ಪೂಜೆ”ಯನ್ನು ನೇರವೆರಿಸಿದರು. ಕೋವಿಡ್-19 ಇರುವ ಹಿನ್ನಲೆಯಲ್ಲಿ ಕಜಂಬಿನ ಮಕ್ಕಳನ್ನು ಸ್ನಾನ ಮಾಡಿಸುವ ಬದಲಾಗಿ ದೇವರ ತೀರ್ಥ ಪ್ರೋಕ್ಷಣೆಯನ್ನು ಮಾಡಲಾಯಿತು.
ಮಕ್ಕಳನ್ನು ದೇವರಿಗೆ ಹರಕೆ ರೂಪದಲ್ಲಿ ಸಾಂಕೇತಿಕವಾಗಿ ಒಪ್ಪಿಸುವ ವಿಶಿಷ್ಟ ಸಂಪ್ರದಾಯವೇ ’ಕಜಂಬು’. ವಿಟ್ಲ ಸೀಮೆಗೆ ಸಂಬಂಧಪಟ್ಟ ಗ್ರಾಮದ ಭಕ್ತಾದಿಗಳು ಹಾಗೂ ಹರಕೆ ಹೇಳಿಕೊಂಡ ಭಕ್ತರು 1 ದಿನದ ವ್ರತದ ಅನುಷ್ಠಾನದಲ್ಲಿದ್ದು, ಮಧ್ಯಾಹ್ನ ಸಣ್ಣ ಉಳ್ಳಾಲ್ತಿ ಮತ್ತು ದೊಡ್ಡ ಉಳ್ಳಾಲ್ತಿ ( ಎಲ್ಯಕ್ಕೆ ಮತ್ತು ಮಲ್ಲಕ್ಕೆ)ಯ ಮೂರ್ತಿಗಳೊಂದಿಗೆ ದೇವಿಗೆ ಆಭರಣ, ಭಂಡಾರಗಳು ವಿಟ್ಲ ಅರಮನೆಯಿಂದ ದೇವಾಲಯ ಸೇರುತ್ತದೆ. ಕಜಂಬು ಜಾತ್ರೋ ತ್ಸವದ ರಾತ್ರಿ ದೇವಾಲಯಕ್ಕೆ ಪೂರ್ಣಕುಂಭ ಸ್ವಾಗತದಲ್ಲಿ ವಿಟ್ಲ ಅರಮನೆಯಿಂದ ಅರಸು ವಂಶದ ಹಿರಿಯರ ಆಗಮನವಾದ ಬಳಿಕ, ದೇವಿಗೆ ಮಹಾ ಮಂಗಳಾರತಿ ನಡೆಯಿತು.
ದೇವಾಲಯದ ಹಿಂದೆ ಹರಿಯುತ್ತಿರುವ ಹೊಳೆ ಯಲ್ಲಿ ಹರಕೆ ಹೊತ್ತ ಮಕ್ಕಳು ಶುಚೀರ್ಭೂತರಾಗಿ ಸಿದ್ಧರಾಗಿ ದೇವಾಲಯದ ಮುಂಭಾಗದಲ್ಲಿ ಸೇರುತ್ತಾರೆ. ದೇವಿಯರ ಪಲ್ಲಕ್ಕಿ ಉತ್ಸವ ನಡೆದ ಬಳಿಕ ಸಂಪ್ರದಾಯದಂತೆ ದೇವಿಯ ಗುಡಿಗೆ ಅಡ್ಡಬಿದ್ದು ಅಂಗಣದ ನಾಲ್ಕೂ ದಿಕ್ಕುಗಳಲ್ಲಿ ದೇವರ ಕೆಲಸ ಮಾಡುವ ‘ನಾಲ್ಪೋಳು’ ಎಂಬ ದೈವಮಾನಿಗಳಿಗೆ ಕಾಣಿಕೆಯಿತ್ತು ತೆರಳಿದ ನಂತರ ದೇವರ ಗರ್ಭಗುಡಿಯ ಮೆಟ್ಟಿಲಿಗೆ ಮಕ್ಕಳ ತಲೆಯನ್ನು ಸ್ಪರ್ಶಿಸಿ ಹರಕೆ ಒಪ್ಪಿಸಿಕೊಳ್ಳುತ್ತಾರೆ.