


ಬೆಳಗಾವಿ: ಚಲಿಸುತ್ತಿದ್ದ ಲಾರಿ ಏರಿ ಸಿನಿಮಾ ಮಾದರಿಯಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯ ಶಂಕರಾನಂದ ಪುತ್ಥಳಿ ಬಳಿ ಈ ಘಟನೆ ಸಂಭವಿಸಿದೆ. ರುಕ್ಷ್ಮಿಣಿ ನಗರದ ನಿವಾಸಿ, ಅಯಾಜ್ ಸವಣೂರ(36) ಹಲ್ಲೆಗೊಳಗಾದವರು.
ಹಿಂಡಲಗಾ ಬಳಿ ಲಾರಿಯು ಆಕ್ಸಿಡೆಂಟ್ ಮಾಡಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಎಂಟು ಜನರ ಗುಂಪು ಬೆನ್ನಟ್ಟಿ ಬಂದು ಲಾರಿ ಏರಿ ಚಾಲಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಗಳು ಅಯಾಜ್ ಅವರ ತಲೆ, ಬೆನ್ನು, ಕಿವಿ ಮತ್ತು ತೊಡೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅಷ್ಟೇ ಅಲ್ಲದೆ, ಲಾರಿ ಮೇಲೆ ಕಲ್ಲು ತೂರಾಟ ನಡೆಸಿ ಗಾಜನ್ನು ಪುಡಿಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
ಗಂಭೀರ ಗಾಯಗೊಂಡಿರುವ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಬೆಳಗಾವಿ ಪೊಲೀಸರ ತಂಡ ಮತ್ತು ಸೋಕೋ ತಂಡ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.








