ಶ್ರೀರಾಮನ ಅವಹೇಳನ ಮಾಡುವ ಅನ್ನಪೂರಣಿ ಹೆಸರಿನ ಚಿತ್ರ ಬಿಡುಗಡೆಯಾಗಿದ್ದು, ಇದರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಮಾಡಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಜವಾನ್ ಚಿತ್ರದ ಖ್ಯಾತಿಯ ಬಳಿಕ ನಟಿ ನಯನತಾರಾ ಅನ್ನಪೂರಣಿಯಲ್ಲಿ ಕಾಣಿಸಿಕೊಂಡಿದ್ದು, ಅವರ ವಿರುದ್ಧವೂ ಈಗ ದೂರು ದಾಖಲಾಗಿದೆ. ಇದು ಅವರ 75ನೇ ಚಿತ್ರ.
ಈ ಚಿತ್ರದಲ್ಲಿ ರಾಮನನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲ, ಚಿತ್ರವು ಲವ್ ಜಿಹಾದ್ನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ರಮೇಶ್ ಸೋಲಂಕಿ, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್ಫಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ. ಅನ್ನಪೂರ್ಣಿ ಆಹಾರದ ದೇವತೆಯಾಗಿದ್ದು, ನಯನತಾರಾ ಸಂಪ್ರದಾಯವನ್ನು ಮೀರಿದ್ದಾರೆ ಎಂದು ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ. ಚಿತ್ರದಲ್ಲಿ ಲವ್ ಜಿಹಾದ್ ಪ್ರಚೋದಿಸಲಾಗಿದೆ. ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ನಟಿಯನ್ನು ಮಾಂಸ ತಿನ್ನಲು ಮನವೊಲಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ದೂರಿದ್ದಾರೆ.