ಇಬ್ಬರು ಸಹೋದರರು ಸೇರಿದಂತೆ ಐವರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು(ತಮಿಳುನಾಡು) ವಾಲ್ಪಾರೈನಲ್ಲಿ ನಡೆದಿದೆ.
ಮೃತರನ್ನು ಎಸ್. ನಫಿಲ್, ಆರ್. ಅಜಯ್, ಆರ್. ಧನುಷ್, ಆರ್. ವಿನಿತ್ ಮತ್ತು ಶರತ್ ಎಂದು ಗುರುತಿಸಲಾಗಿದೆ.
ನಫಿಲ್, ಅಜಯ್, ಮತ್ತು ಧನುಷ್ ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೊಯಮತ್ತೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಿತ್ ಇತ್ತೀಚೆಗಷ್ಟೇ ಎಂ.ಎಸ್ಸಿ ಮುಗಿಸಿದ್ದ. ಶುಕ್ರವಾರದಂದು ಐವರು ಸ್ನೇಹಿತರು ವಾಲ್ಪಾರೈಗೆ ಪ್ರವಾಸ ಕೈಗೊಂಡಿದ್ದರು.
ಯುವಕರ ಗುಂಪು ಸಂಜೆ ನಲ್ಲಕಾತು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಐವರೂ ಮುಳುಗಿ ಸಾವನ್ನಪ್ಪಿದ್ದಾರೆ. ವಾಲ್ಪಾರೈನಲ್ಲಿ ಬೀಡುಬಿಟ್ಟಿದ್ದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ವಿ. ಮುತ್ತುಪಾಂಡಿ ನೇತೃತ್ವದ ರಕ್ಷಣಾ ತಂಡವು ಗಂಟೆಯೊಳಗೆ ಎಲ್ಲ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತದೇಹಗಳನ್ನು ವಾಲ್ಪಾರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.