ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಅ.31ರಂದು ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ.
2020 ಅ.31ರಂದು ಮಂಗಳೂರು ಸೇರಿದಂತೆ ದೇಶದ 6 ವಿಮಾನ ನಿಲ್ದಾಣಗಳ ಆಡಳಿತವನ್ನು ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ವಹಿಸಿಕೊಂಡಿತ್ತು.
ಕೇಂದ್ರ ಸರ್ಕಾರ ಖಾಸಗಿ ರಂಗದ ಮೂಲಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ತೆಗೆದುಕೊಂಡ ನಿರ್ಧಾರದ ಹಿನ್ನೆಲೆ ಇದಾಗಿತ್ತು. ದೇಶದ ಆರು ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ವಿಮಾನ ನಿಲ್ದಾಣ ಪ್ರಥಮವಾಗಿ ಅದಾನಿ ಆಡಳಿತಕ್ಕೆ ಬಂದಿತ್ತು. ಆ ಬಳಿಕ ಅಹಮ್ಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಅದಾನಿ ತೆಕ್ಕೆಗೆ ತೆಗೆದುಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣವನ್ನು 2020 ಜುಲೈನಲ್ಲಿ ಅದಾನಿ ಕಂಪನಿ ಜಿವಿಕೆ ಕೈನಿಂದ ತೆಗೆದುಕೊಂಡಿತ್ತು. ಪ್ರಸಕ್ತ ನವಿ ಮುಂಬೈನಲ್ಲಿ ಅದಾನಿ ಗ್ರೂಪ್ನ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, 2024ರ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.
ಒಪ್ಪಂದ ಪ್ರಕಾರ ಮೂರು ವರ್ಷಗಳ ವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು. ಇದೀಗ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಇಡೀ ವಿಮಾನ ನಿಲ್ದಾಣ ಆಡಳಿತ ಅದಾನಿ ತೆಕ್ಕೆಗೆ ಹೋಗುತ್ತಿದೆ.
ಅದಾನಿ ತೆಕ್ಕೆಗೆ ಸೇರ್ಪಡೆಗೊಂಡ ವೇಳೆ 118 ಮಂದಿ ಎಎಐ ಸಿಬ್ಬಂದಿ ಇದ್ದರು. ಅವರಲ್ಲಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿತ್ತು. ಇವರೆಲ್ಲ ಎಜಿಎಂ ಹಾಗೂ ಕೆಳಗಿನ ಹಂತದವರು. ಅವರೆಲ್ಲ ಹಣಕಾಸು, ಎಚ್ಆರ್, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್ ಸೇರಿದಂತೆ ಆರು ವಿಭಾಗಗಳಲ್ಲಿ ಅದಾನಿ ಸಿಬ್ಬಂದಿಯೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಒಪ್ಪಂದ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಈಗ ಈ 97 ಮಂದಿಯನ್ನು ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಗೊಳಿಸಲಾಗಿದೆ. ಇನ್ನು ಈ ಆರು ವಿಭಾಗ ಕೂಡ ಅದಾನಿ ಆಡಳಿತಕ್ಕೆ ಒಳಪಡಲಿದೆ.
ಏರ್ಟ್ರಾಫಿಕ್ ಕಂಟ್ರೋಲ್(ಎಟಿಸಿ), ಕಾರ್ಗೊ ಹಾಗೂ ಸಿಎನ್ಎಸ್(ಕಮ್ಯುನಿಕೇಷನ್ ನೇವಿಗೇಷನ್ ಅಂಡ್ ಸರ್ವೆಲೆನ್ಸ್) ಮಾತ್ರ ಅದಾನಿ ಹೊರತಾಗಿ ಇರಲಿದೆ. ಆದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಮೂರು ವರ್ಷಗಳಿಂದ ಅದಾನಿ ಹಾಗೂ ಎಎಐ ಜಂಟಿ ಆಡಳಿತದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವೊಂದು ಸುಧಾರಣೆ ಮಾಡಲಾಗಿದೆ. ಏರ್ಪೋರ್ಟ್ ವಿಲೇಜ್’ ಶಾಪಿಂಗ್ ಅಂಗಡಿಗಳನ್ನು ತೆರೆಯಲು ಇಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.