




ಗದಗ: ಎರಡು ಸಮುದಾಯಗಳ ನಡುವೆ ನೀರಿನ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿಯನ್ನು ಬಂಧನ ಮಾಡಲಾಗಿದೆ.
ಮುಂಡರಗಿ ತಾಲೂಕಿನ ಚಿಕ್ಕ ವಡ್ಡಟ್ಟಿ ಗ್ರಾಮದಲ್ಲಿ ಎಸ್ಟಿ ಜನಾಂಗದ ರೈತನ ಜಮೀನಿನಲ್ಲಿ ದಲಿತ ವ್ಯಕ್ತಿ ನೀರಿನ ಬಳಕೆ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ 21 ಜನರ ಬಂಧನ ಮಾಡಲಾಗಿದೆ ಎಂದು ಗದಗ ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ.
ಎಸ್ಟಿ ಜನಾಂಗ ರೈತನ ಜಮೀನಿನಲ್ಲಿ ನೀರಿನ ಹೊಂಡ ಇದೆ. ಅದರಲ್ಲಿ ಎಸ್ಸಿ ಯುವಕರು ಈಜಲು ಹೋಗಿದ್ದರು. ಬೇಸಿಗೆಯಲ್ಲಿ ಅನಾವಶ್ಯ ನೀರು ಹಾಳು ಮಾಡಬೇಡಿ. ಜನ ಜಾನುವಾರುಗಳಿಗೆ ನೀರಿಲ್ಲ ಎಂದು ಎಸ್ಟಿ ರೈತ ವಿರೋಧ ಮಾಡಿದ್ದ.
ವಿರೋಧಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಎರಡು ಗುಂಪಿನ 32 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಪೈಕಿ ಕೆಲವನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರೆ ಇನ್ನು ಕೆಲವು ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಳೆದ ತಿಂಗಳು ಶಿವರಾತ್ರಿ ಹಬ್ಬದ ಸಂದರ್ಭದಲ್ಲೂ ಸ್ವಲ್ಪ ಗಲಾಟೆ ಆಗಿತ್ತು. ನಂತರ ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆದು ಸರಿ ಹೋಗಿತ್ತು. ಆದರೆ ಸೋಮವಾರ ಮತ್ತೆ ಹೊಡೆದಾಡಿಕೊಂಡಿದ್ದಾರೆ.
ಸ್ಥಳದಲ್ಲಿ ಪೊಲೀಸರು ನಿಯೋಜನೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದೆವೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ್ ಹೇಳಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








