ವಿಟ್ಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ
ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಭಗವಂತಕೋಡಿ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆಯ ಭಗವಂತಕೋಡಿಯಲ್ಲಿ ವಾಸವಿರುವ ಹಸೈನಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಹಸೈನಾರ್ ರವರು ಹೆಂಡತಿ ಮಕ್ಕಳು ಸೊಸೆಯಂದಿರ ಜೊತೆ ವಾಸವಾಗಿದ್ದು, ಎಲೆ ಅಡಿಕೆ ಖರೀದಿಸಿ ಮಡಿಕೇರಿ ಸಂತೆಗೆ ಹೋಗಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು.
ಮಾ. 8 ರಂದು ಹಸೈನಾರ್ ಮತ್ತು ಅವರ ಪತ್ನಿ ತಂಗಿಯ ಮನೆ ಅಜೀಲಮೊಗರುಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಮಕ್ಕಳು ಮತ್ತು ಸೊಸೆಯಂದಿರು ಮಾತ್ರ ಇದ್ದರು, ಮಾ. 9 ರಂದು ಬೆಳಗ್ಗೆ ಹಸೈನಾರ್ ರವರಿಗೆ ಕಿರಿಯ ಮಗ ಇಜಝ್ ಕರೆ ಮಾಡಿ ಮನೆಯಲ್ಲಿ ರಾತ್ರಿ ಕಳ್ಳತನ ನಡೆದಿರುವುದಾಗಿ ತಿಳಿಸಿದ್ದಾರೆ.
ಕೂಡಲೇ ಮನೆಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲು ಮುರಿದಿದ್ದು ಮನೆಯ ಅಂತಸ್ಥಿನ ಎರಡು ಬೆಡ್ ರೂಮಿನಲ್ಲಿದ್ದ ಮೂರು ಶೀಟ್ ಕಪಾಟುಗಳ ಬಾಗಿಲನ್ನು ಮುರಿದು ಮಗಳ ಕಿವಿಯ ಬೆಂಡೋಲೆ,ಕಾಲು ಚೈನ್, ಉಂಗುರ, ಮಗುವಿನ ಆಭರಣಗಳು ಮತ್ತು ವ್ಯಾಪಾರದ 35,250 ರೂ. ಕಳವಾಗಿರುವುದು ಕಂಡು ಬಂದಿದೆ.
ರಾತ್ರಿ 12.00 ರಿಂದ ಬೆಳಗ್ಗೆ 08.00 ಗಂಟೆಯ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಕಳ್ಳತನ ನೆಡೆಸಿರುವುದು ಬೆಳಕಿಗೆ ಬಂದಿದೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 1.45.000 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.