ಬೆಂಗಳೂರು: ಡಾರ್ಕ್ ವೆಬ್ ಪ್ರಕರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಾಂತ್ ಅಲಿಯಾಸ್ ಶ್ರೀಕಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 33ನೇ ಸಿಸಿಹೆಚ್ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೊಸವರ್ಷದ ದಿನವಾದ ಬೇಲ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಆರೋಪಿಗೆ ಕೋರ್ಟ್ ನಿರಾಶೆ ಮೂಡಿಸಿದೆ. ಈವರೆಗೆ ಡಾರ್ಕ್ವೆಬ್ ಪ್ರಕರಣದ ಇತರೆ ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಲಾಗಿದೆ, ಆದರೆ ಪ್ರಕರಣದ ಎ10 ಶ್ರೀಕಿಗೆ ಜಾಮೀನು ಅರ್ಜಿ ನಿರಾಕರಣೆ ಮಾಡಲಾಗಿದೆ. ಈ ನಿರಾಕರಣೆಗೆ ಕೋರ್ಟ್ ಕೆಲವು ಕಾರಣಗಳನ್ನೂ ನೀಡಿದೆ.
ಮೊದಲಿಗೆ ಶ್ರೀಕಿ ಪರವಾಗಿ ವಾದ ಮಾಡಿದ ವಕೀಲರು ಅವರು ನಾನ್ ಬೇಲೆಬಲ್ ಅಫೆನ್ಸ್ನಲ್ಲಿ ಭಾಗಿಯಾಗಿಲ್ಲ ಆದ್ದರಿಂದ ಅವರಿಗೆ ಜಾಮೀನು ನೀಡಬೇಕೆಂದುವಾದಿಸಿದರು.
ಆದರೆ ಸರ್ಕಾರದ ಪರ ವಕೀಲರು ಪ್ರೈಮಾಫೆಸಿ ಬಗ್ಗೆ ವಿವರಿಸಿದರು, ಆತ ನಾನ್ ಬೇಲೆಬಲ್ ಆಫೇನ್ಸ್ನಲ್ಲಿ ಭಾಗಿಯಾಗಿದ್ದಾನೆಂದು ವಾದಿಸಿದರು. 4/11/2020 ರಂದು ವಿದೇಶದಿಂದ ಡ್ರಗ್ ಬರುವ ಮಾಹಿತಿ ಸಿಕ್ಕಿತ್ತು, ಅರವ್ಗೌಡ ಎಂಬ ವ್ಯಕ್ತಿಯ ಹೆಸರಿನಲ್ಲಿ ಪಾರ್ಸೆಲ್ ಬರ್ತಾ ಇತ್ತು. ಅದರಲ್ಲಿ ಹೈಡ್ರೋ ಗಾಂಜಾ ಚಾಮರಾಜಪೇಟೆ ಪೋಸ್ಟ್ ಆಫೀಸ್ಗೆ ಬರ್ತಾ ಇತ್ತು.
ಅದನ್ನ ಸುಜಯ್ ಮತ್ತು ಹೇಮಂತ್ ರಿಸಿವ್ ಮಾಡೋಕೆ ಬಂದಿದ್ದರು, ಅವರಿಬ್ಬರೂ ಆರೋಪಿ ಶ್ರೀಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ಈತನೊಬ್ಬ ಹವ್ಯಾಸಿ ಅಪರಾಧ ಕೃತ್ಯವೆಸಗುವವನಾಗಿದ್ದಾನೆ, ಈತನ ವಿರುದ್ದ ಅನೇಕ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ಗಳಿವೆ. ಈತನಿಗೆ ಜಾಮೀನು ನೀಡಿದ್ರೆ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ, ಕಾರಣ ಈತ ಒಬ್ಬ ಇಂಟರ್ ನ್ಯಾಷನಲ್ ಹ್ಯಾಕರ್. ಹಲವಾರು ಹ್ಯಾಕಿಂಗ್ ಕೃತ್ಯಗಳನ್ನೆಸಗಿದ್ದಾನೆ, ಅಲ್ಲದೇ ಈತ ಇಡೀ ಸಮಾಜಕ್ಕೆ ಮಾದಕವಸ್ತು ಸಪ್ಲೇ ಮಾಡುವ ಸಾಧ್ಯತೆ ಇದೆ.
ಇದೊಂದು ಗಂಭೀರ ಪ್ರಕರಣ ಇನ್ನೂ ತನಿಖಾ ಹಂತದಲ್ಲಿಯೇ ಇದೆ, ಈತ ಇನ್ನೂ ಅನೇಕ ಮಂದಿಯ ಜೊತೆ ಸೇರಿ ಈ ಕೃತ್ಯವಸಗಿರುವ ಶಂಕೆ ಇದೆ ಎಂದು ವಾದಿಸಿದರು.
ವಕೀಲರ ಈ ವಾದವನ್ನು ಪುರಸ್ಕರಿಸಿದ ನ್ಯಾಯ ಪೀಠ ಶ್ರೀಕಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.