ಬೆಂಗಳೂರು : ನ.18 (ಇಂದು) ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಹಂಸಲೇಖ ಅವರಿಗೆ ಬೆಂಬಲಿಸಿ ಪ್ರತಿಭಟನೆ ನಡೆಯಲಿದೆ. “ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ, ಸಂಗೀತ ನಿರ್ದೇಶಕರಾದ ಹಂಸಲೇಖರವರ ಸತ್ಯದ ನುಡಿಗಳಿಗೆ ಧ್ವನಿಯಾಗಿ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಹಾಗೂ ಅವರಿಗೆ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಲು ಕೋರಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.
“ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಜನರ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿರುವುದು ಆತಂಕಕಾರಿ ಮತ್ತು ಅಪಾಯಕಾರಿ ಬೆಳವಣಿಗೆ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ್ಯವನ್ನು ಕುರಿತು ಸತ್ಯವನ್ನು ಮಾತನಾಡುವುದು, ಬರೆಯುವುದು ಮಹಾ ಅಪರಾಧವಾಗಿ ಬಿಂಬಿತವಾಗುತ್ತಿದೆ. ಹಂಸಲೇಖರವರು ಅಸ್ಪೃಶ್ಯತೆಯ ನಿರ್ಮೂಲನೆಗೆ ಸಂಬoಧಿಸಿದoತೆ ದಲಿತರು ಮತ್ತು ಶೂದ್ರ ಸಮುದಾಯದ ಆಹಾರ ಸಂಸ್ಕೃತಿಯನ್ನು ಉಲ್ಲೇಖಿಸಿ ಮಾತನಾಡಿರುವುದು ಸಾಂದರ್ಭಿಕವಾದರೂ ಸಾರ್ವಕಾಲಿಕ ಮತ್ತು ಸಂವಿಧಾನಾತ್ಮಕವಾಗಿದೆ ಎಂಬುವುದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಹಂಸಲೇಖರವರ ಶೋಷಣೆಯ ಸಂಕೇತವಾಗಿರುವ ಮನುವಾದಿಗಳ ಕುತಂತ್ರಕ್ಕೆ ಮಣಿದು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ನೆಲ ಮೂಲ ಸಂಸ್ಕೃತಿಯ ಚಿಂತಕರಾದ ಹಂಸಲೇಖರವರ ಸೃಜನಶೀಲ ದೇಶಿಸಾಹಿತ್ಯ, ಸಂಗೀತವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬೆಳಸಿದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಯುವಜನತೆ ಸದಾ ಅವರಿಗೆ ಬೆಂಬಲವಾಗಿರುತ್ತದೆ. ಜತೆಗೆ ಅವರಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕೆಂದು” ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.