




ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರು ವಿಧಿವಶರಾಗಿದ್ದು, ದೀರ್ಘಕಾಲದ ಹೋರಾಟ ಅಂತ್ಯವಾಗಿದೆ. ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಪಡೆದ ಭಾರತದ ಮೊದಲ ವ್ಯಕ್ತಿಯಾಗಿದ್ದ ಹರೀಶ್ ರಾಣಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹರೀಶ್ ರಾಣಾ(31) ಅವರನ್ನು ಮಾರ್ಚ್ 14 ರಂದು ಗಾಜಿಯಾಬಾದ್ನ ತಮ್ಮ ನಿವಾಸದಿಂದ ಏಮ್ಸ್ ಸಂಸ್ಥೆಗೆ ಸ್ಥಳಾಂತರಿಸಲಾಗಿತ್ತು. 2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಅವರು ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಅದರಿಂದ ಬಳಿಕ ಅವರು ಕೋಮಾ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದರು ಮತ್ತು ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿದ್ದರು.
ಈ ಪ್ರಕರಣದಲ್ಲಿ ಕುಟುಂಬವು ಮೊದಲಿಗೆ 2024ರಲ್ಲಿ ದೆಹಲಿ ಹೈಕೋರ್ಟ್ ಮೊರೆ ಹೋಗಿ ಜೀವ ರಕ್ಷಕ ಚಿಕಿತ್ಸೆ ಹಿಂಪಡೆಯಲು ಅನುಮತಿ ಕೋರಿತ್ತು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ಗೆ ಹೋದ ಕುಟುಂಬದ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ತೀರ್ಪು ನೀಡಿದ್ದು, ದೇಶದಲ್ಲಿ ಇದೇ ಮೊದಲ ಬಾರಿ ಇಂತಹ ಅನುಮತಿ ನೀಡಲಾಗಿದ್ದು, ವೈದ್ಯಕೀಯ ವರದಿಗಳನ್ನು ಪರಿಶೀಲಿಸಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತ್ತು.
ನಿಷ್ಕ್ರಿಯ ದಯಾಮರಣ ಎಂದರೆ, ರೋಗಿಯ ಜೀವವನ್ನು ಕೃತಕವಾಗಿ ಉಳಿಸುವ ವೈದ್ಯಕೀಯ ಉಪಕರಣಗಳನ್ನು ಹಿಂಪಡೆಯುವುದು. ಇದರಿಂದ ರೋಗಿ ಸಹಜವಾಗಿ ಮರಣ ಹೊಂದಲು ಅವಕಾಶ ದೊರೆಯುತ್ತದೆ. ಹಲವು ವರ್ಷಗಳಿಂದ ಗುಣಮುಖವಾಗದ ಯಾತನೆಯಲ್ಲಿ ನರಳುತ್ತಿದ್ದ ಮಗನಿಗೆ ಈ ಕ್ರಮ ಮುಕ್ತಿ ನೀಡುತ್ತದೆ ಎಂದು ಹರೀಶ್ ರಾಣಾ ಅವರ ತಂದೆ ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.








