ಹರಿಯಾಣ: 7 ವರ್ಷದ ಮಗ ಅನಾರೋಗ್ಯದಿಂದ ಬಳಲುತ್ತಿದ್ದ ಈತನ ಚೇತರಿಕೆಗಾಗಿ ಪಾಲಕರು ಆಸ್ಪತ್ರೆಯಲ್ಲೇ ಕಾಯುತ್ತಿದ್ದು, ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮಗು ಸತ್ತಿದೆ ಎಂದು ಕುಟುಂಬಸ್ಥರಿಗೆ ಶವ ಹಸ್ತಾಂತರಿಸಿದ್ದರು.
ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಹೆತ್ತಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ಕಂದನ ದೇಹಕ್ಕೆ ತಲೆ ಚಚ್ಚಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಿದ್ದ ತಾಯಿ, ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇಹದ ಮುಂದೆ ಗೋಗರೆಯುತ್ತಿದ್ದಳು. ಈ ವೇಳೆ ಶವವಾಗಿ ಮಲಗಿದ್ದ ಮಗುವಿನ ದೇಹದಲ್ಲಿ ದಿಢೀರ್ ಚಲನೆಯುಂಟಾಗಿದೆ.
ಹರಿಯಾಣದ ಜಜ್ಜಾರ್ ಜಿಲ್ಲೆಯ ಹಿತೇಶ್ ದಂಪತಿಯ 7 ವರ್ಷದ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್ ಜ್ವರ ಕಾಣಿಸಿಕೊಂಡಿದ್ದು,ತೀವ್ರ ಅಸ್ವಸ್ಥನಾಗಿದ್ದ ಕುನಾಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಮಗು ಮೃತಪಟ್ಟಿದೆ ಎಂದು ದೆಹಲಿ ವೈದ್ಯರು ಪಾಲಕರಿಗೆ ಹೇಳಿದ್ದು ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ದೂರದ ಊರಲ್ಲಿದ್ದ ಕುನಾಲ್ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಲು, ಅವರ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಪವಾಡ ಸದೃಶ್ಯವೆಂಬಂತೆ ಶವವಾಗಿದ್ದ ಮಗು ಇದೀಗ ಜೀವಂತವಾಗಿದೆ.
ಕುನಾಲ್ ತಾಯಿ ಅಳುತ್ತಾ ಮಗನ ದೇಹದ ಮೇಲೆ ಬಿದ್ದು ಆಕ್ರಂದಿಸುತ್ತಿದ್ದ ವೇಳೆ ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ… ಎಂದು ಮಗನ ದೇಹವನ್ನೆಲ್ಲ ಸವರುತ್ತಾ ಎಳೆದಾಡಿದ್ದು, ಆ ವೇಳೆ ಆತನ ದೇಹದಲ್ಲಿ ಚಲನೆ ಕಂಡು ಬಂದು ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇಹದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದೆ. ಎದೆಯ ಬಡಿತವೂ ಶುರುವಾಯಿತು. ‘ಡಾಕ್ಟ್ರೇ ಮಗ ಬದುಕಿದ್ದಾನೆ, ಪ್ಲೀಸ್ ಉಳಿಸಿಕೊಡಿ’ ಎಂದು ಮಗು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರು. ಪರೀಕ್ಷಿಸಿದ ವೈದ್ಯರು, ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದರೂ ಪಾಲಕರು ಚಿಕಿತ್ಸೆ ಕೊಡಲು ಹೇಳಿದ್ದರು. 20 ದಿನಗಳ ಕಾಲ ಚಿಕಿತ್ಸೆ ಕೊಟ್ಟಿದ್ದು, ಪವಾಡ ಎಂಬಂತೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಜೂ.15 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಆರಾಮವಾಗಿದೆ ಎಂದು ತಿಳಿದುಬಂದಿದೆ.