ಹಾಸನ: ರಾತ್ರಿ ಅಪರಿಚಿತ ವ್ಯಕ್ತಿಯ ಕೊಲೆ. ಸಾಕ್ಷಿ ನಾಶಪಡಿಸಲು ದುಷ್ಕರ್ಮಿಗಳ ಯೋಚನೆ. ಆದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾಲ್ಕಿತ್ತ ಖದೀಮರ ಅಟ್ಟಹಾಸ ಜನರನ್ನು ಬೆಚ್ಚಿಬೀಳಿಸಿದೆ. ಮುಂಜಾನೆ ಎಲ್ಲವೂ ಸರಿಹೋಗುತ್ತೆ. ಶವ ಸುಟ್ಟು ಹೋಗುತ್ತೆ ಅಂದುಕೊಂಡಿದ್ದ ದುಷ್ಕರ್ಮಿಗಳ ಯೋಚನೆ ತಲೆಕೆಳಗಾಗಿದೆ. ಈ ಘಟನೆಯ ಹಿಂದಿನ ಕೈವಾಡದ ಜಾಲ ಭೇದಿಸಲು ಪೊಲೀಸರು ತಯಾರಾಗಿದ್ದಾರೆ. ರಾತ್ರಿ ಬೆಳಗಾಗುವುದರಲ್ಲಿ ನಡೆದ ಕೃತ್ಯ ಜನರನ್ನು ಬೆಚ್ಚಿ ಬೀಳಿಸಿದೆ.
ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯೊಂದು ಬರ್ಬರವಾಗಿ ಕೊಂದು ಮೃತದೇಹ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಅರಸಿಕೆರೆ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿಗಳು ಅಂದಾಜು 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ, ಸಾಕ್ಷಿ ನಾಶ ಪಡಿಸಲು ಪೆಟ್ರೋಲ್ ಸುರಿದು ಮೃತ ದೇಹ ಸುಟ್ಟು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದ್ದು, ಘಟನಾ ಸ್ಥಳದಲ್ಲಿ ವ್ಯಕ್ತಿಯ ರಕ್ತದ ಕಲೆಗಳು ಹಾಗೂ ಅರೆಬೆಂದ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳ ವಿಕೃತಿಗೆ ಇಡೀ ಹಾಸನ ಜಿಲ್ಲೆಯೇ ಬೆಚ್ಚಿ ಬಿದ್ದಿದೆ. ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.