ಮಂಡ್ಯ: ಅವರಿಬ್ಬರದ್ದು ಅನೇಕ ವರ್ಷಗಳ ಗೆಳತನ. ಮಹದೇವು ಎಂಬಾತ ಕುಡಿದು ಮಜಾ ಮಾಡುವ ಎಂದು ಕುಮಾರನನ್ನು ಮನೆಗೆ ಕರೆದಿದ್ದ. ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ..! ನಂತರ ಆದದ್ದೇ ಬೇರೆ. ಕ್ಷುಲ್ಲಕ ಜಗಳಕ್ಕೆ ಒಬ್ಬನ ಪ್ರಾಣಪಕ್ಷಿಯೇ ಹಾರಿಹೋಗಿದೆ.
ಹಿತರಿಬ್ಬರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಹಳ್ಳಿ ಗ್ರಾಮದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಯುವಕರಲ್ಲಿ ಜಗಳ ಏರ್ಪಟ್ಟು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಚೆನ್ನನಹಳ್ಳಿ ಗ್ರಾಮದ ಕುಮಾರ್(30) ಮೃತ ಯುವಕ. ಅದೇ ಗ್ರಾಮದ ಮಹದೇವು ಎಂಬ ಸ್ನೇಹಿತ ಕುಮಾರ್ನನ್ನು ಹತ್ಯೆ ಮಾಡಿದ ಆರೋಪಿ. ನಿನ್ನೆ ರಾತ್ರಿ ಕುಮಾರ್ ಹಾಗೂ ಮಹದೇವು ಇಬ್ಬರು ಮದ್ಯ ಸೇವನೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು. ಈ ವೇಳೆ ಮಹದೇವು ನಮ್ಮ ಮನೆಯಲ್ಲಿ ಯಾರೂ ಇಲ್ಲ, ಇಲ್ಲೇ ಪಾರ್ಟಿ ಮಾಡೋಣ ಬಾ ಎಂದು ಕುಮಾರನನ್ನು ಕರೆದುಕೊಂಡು ಹೋಗಿದ್ದ.
ನಂತರ ಮಹದೇವು ಹಾಗೂ ಕುಮಾರ್ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಈ ವೇಳೆ ಅದು ಇಬ್ಬರ ನಡುವೆ ತಾರಕಕ್ಕೆ ಏರಿದ್ದು, ಮಹದೇವು ಕುಮಾರನಿಗೆ ಬಾಟಲಿ ಹಾಗೂ ರಾಡಿನಿಂದ ಹೊಡೆದಿದ್ದಾನೆ. ಇದರಿಂದ ರಕ್ತಶ್ರಾವವಾಗಿ ಕುಮಾರ ಮೃತಪಟ್ಟಿದ್ಯಾನೆ. ಬಳಿಕ ಮಹದೇವು ಪರಾರಿಯಾಗಿದ್ದಾನೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.