ಹೆಬ್ರಿ: ಜಾಗದ ತಕರಾರಿನ ದ್ವೇಷಕ್ಕೆ ಪಕ್ಕದ ಮನೆಯ ನಾಯಿಯನ್ನು ಗುಂಡಿಟ್ಟು ಕೊಂದು, ಮನೆ ಮಂದಿಗೆ ಜೀವಬೆದರಿಕೆಯೊಡ್ಡಿದ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಪೆರ್ಡೂರು ಗ್ರಾಮದ ಅಲಂಗಾರು ಅಂತುಬೆಟ್ಟುವಿನಲ್ಲಿ ಜಾಗದ ತಕರಾರಿನ ಕಾರಣ ರಾಜೇಂದ್ರ ಪ್ರಸಾದ್ ಶೆಟ್ಟಿ ಎಂಬಾತ ಪಕ್ಕದ ಮನೆಯ ನಾಯಿಯನ್ನು ಗುಂಡಿಟ್ಟು ಕೊಂದಿದ್ದು, ಇದನ್ನು ವಿಚಾರಿಸಲು ಮುಂದಾದವರನ್ನು ಕೊಲ್ಲುತ್ತೇನೆ ಎನ್ನುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಭಾರತಿ ಸುಧಾಕರ ಪೂಜಾರಿ ಅವರು ಹಿರಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.
ಜೂ. 13ರಂದು ಬೆಳಗ್ಗೆ ರಾಜೇಂದ್ರ ಪ್ರಸಾದ್ಶೆಟ್ಟಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸಾಕು ನಾಯಿಯನ್ನು ತನ್ನ ಬಳಿ ಇರುವ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದು, ಗದ್ದೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದ ನಾಯಿ ಮೃತಪಟ್ಟಿತ್ತು. ಈ ಬಗ್ಗೆ ರಾಜೇಂದ್ರ ಪ್ರಸಾದ್ಶೆಟ್ಟಿಯವರನ್ನು ಕೇಳಿದಾಗ ಇವತ್ತು ನಾಯಿಯನ್ನು ಕೊಲ್ಲುತ್ತಿದ್ದು, ಇನ್ನು ಮುಂದಕ್ಕೆ ಯಾರನ್ನೂ ಬಿಡುವುದಿಲ್ಲ ನಿಮ್ಮನ್ನು ಕೊಂದು ಹೊಂಡ ತೆಗೆದು ಮಣ್ಣು ಹಾಕಿ ಮುಚ್ಚುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ಭಾರತಿ ಸುಧಾಕರ ಪೂಜಾರಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.