




ಕಾಸರಗೋಡು: ಪತಿಯು ಪತ್ನಿಯನ್ನು ಹತ್ಯೆಗೈದ ಘಟನೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ನ ಅಂಬಲತ್ತರ ಎಂಬಲ್ಲಿ ಇಂದು ನಡೆದಿದೆ .
ಕೊಲೆಗೀಡಾದ ಮಹಿಳೆಯನ್ನು ಅಂಬಲತ್ತರ ಕಣೋತ್ ನಿವಾಸಿ ಎನ್.ಟಿ ಬೀನಾ ( 40) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಪತಿ ದಾಮೋದರ ( 55) ಎಂಬಾತನನ್ನು ಅಂಬಲತ್ತರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಂಜಾನೆ ಕೃತ್ಯ ನಡೆದಿದ್ದು, ಬೆಳಿಗ್ಗೆಯಷ್ಟೇ ಬೆಳಕಿಗೆ ಬಂದಿದೆ. ಕೃತ್ಯದ ಬಗ್ಗೆ ದಾಮೋದರನೇ ಸಮೀಪದ ಮನೆಯವರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ತೆರಳಿದಾಗ ಬೀನಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಂಬಲತ್ತರ ಠಾಣಾ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಜಿಲ್ಲೆಯ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ತಡರಾತ್ರಿ ಇಬ್ಬರ ನಡುವೆ ಜಗಳವಾಗಿ ತಲೆಯನ್ನು ಗೋಡೆಗೆ ಬಡಿದು, ಕತ್ತು ಕೊಯ್ದು ಭೀಭತ್ಸ ರೀತಿಯಲ್ಲಿ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓರ್ವ ಪುತ್ರ ವಿಶಾಲ್ ದೆಹಲಿಯಲ್ಲಿ ಮೆಕ್ಯಾನಿಕ್ ಉದ್ಯೋಗದಲ್ಲಿದ್ದು, ಇಬ್ಬರು ಮಾತ್ರ ಮನೆಯಲ್ಲಿದ್ದರು. ಕಳೆದ ಒಂದೂವರೆ ವರ್ಷದಿಂದ ದಂಪತಿ ನಡುವೆ ವಿರಸ ಇತ್ತು ಎನ್ನಲಾಗಿದೆ








