ಮಹಿಳೆ ಆತ್ಮಹತ್ಯೆ ಪ್ರಕರಣವೊಂದು ತನಿಖೆ ವೇಳೆ ಕೊಲೆ ಎಂಬುದು ತಿಳಿದುಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪರಪ್ಪನ ಅಗ್ರಹಾರದ ಕೂಡ್ಲು ಶಿವ ದೇವಾಲಯದ ನಂಜಾರೆಡ್ಡಿ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿಯೊಬ್ಬ ಕಥೆ ಕಟ್ಟಿದ್ದ.
ಪೊಲೀಸರು ಕೂಡ ಅಸಹಜ ಸಾವೆಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಅನುರಾಧ ಅಲಿಯಾಸ್ ಅಲೀಮಾ (31) ಹತ್ಯೆಯಾದವಳು. ರಾಜಶೇಖರ್ ಕೊಲೆ ಆರೋಪಿಯಾಗಿದ್ದಾನೆ. ಅನುರಾಧ ರಾಜಶೇಖರ್ ಜತೆ ಎರಡನೇ ಮದುವೆಯಾಗಿದ್ದಳು. ಮೊದಮೊದಲು ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆ ರಾಜಶೇಖರ್ ಬೇರೊಬ್ಬ ಮಹಿಳೆ ಜತೆಗೆ ಸಂಪರ್ಕ ಹೊಂದಿದ್ದ. ಇದೇ ವಿಚಾರಕ್ಕೆ ಅನುರಾಧ ಹಾಗೂ ರಾಜಶೇಖರ್ ನಡುವೆ ಗಲಾಟೆ ನಡೆಯುತ್ತಲೆ ಇತ್ತು.
ಹತ್ಯೆ ದಿನವು ಅನುರಾಧ ಹಾಗೂ ರಾಜಶೇಖರ್ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ರಾಜಶೇಖರ್ ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಬಳಿಕ ಅನುರಾಧಳನ್ನು ಆಸ್ಪತ್ರೆಗೂ ದಾಖಲು ಮಾಡಿದ್ದ. ಅನುಮಾನ ಬಾರದೆ ಇರಲಿ ಎಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದ. ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ರಹಸ್ಯ ಹೊರಬಂದಿದೆ. ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ.
ಕೂಡಲೇ ರಾಜಶೇಖರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆತ್ಮಹತ್ಯೆ ಬದಲಿಗೆ ಕೊಲೆ ಪ್ರಕರಣವನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.