ಹೈದರಾಬಾದ್: ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿಯೇ ವಕೀಲ ದಂಪತಿಯನ್ನು ಅಟ್ಟಾಡಿಸಿಕೊಂಡು ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ತೆಲಂಗಾಣದ ಮಂಘಾನಿ ಹಾಗೂ ಪೆದ್ದಪಲ್ಲಿ ಪಟ್ಟಣಗಳ ನಡುವಿನ ಪ್ರಮುಖ ರಸ್ತೆಯಲ್ಲಿ ನಡೆದಿದೆ.
ಗಟ್ಟು ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ಕೊಲೆಯಾದವರು. ಈ ದಂಪತಿ ತೆಲಂಗಾಣದ ಹೈಕೋರ್ಟ್ ವಕೀಲರಾಗಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ದಂಪತಿಯು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಅಧಿಕೃತ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ.
ಗಂಭೀರ ಗಾಯಗೊಂಡಿದ್ದ ವಕೀಲ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ದಂಪತಿಯನ್ನು ಅಟ್ಟಿಸಿಕೊಂಡು ಕೊಲೆ ಮಾಡಿರುವುದು ಈ ದೃಶ್ಯದಲ್ಲಿ ನೋಡಬಹುದಾಗಿದೆ. ವಾಮನ್ ರಾವ್ ಅವರ ತಂದೆ ಕೃಷ್ಣ ರಾವ್ ಅವರು ಕುಂಟಿ ಶ್ರೀನಿವಾಸ್ ಹಾಗೂ ಇತರರ ವಿರುದ್ದ ದೂರು ದಾಖಲಿಸಿದ ಅರ್ಧಗಂಟೆಯಲ್ಲಿ ಈ ಕೃತ್ಯ ನಡೆದಿದ್ದು, ವಾಮನ್ ರಾವ್ ಕೂಡ ಸಾಯುವ ಮುನ್ನ ಕುಂಟಿ ಶ್ರೀನಿವಾಸ್ ಹೆಸರು ಹೇಳಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲವೂ ಕುಂಟಿ ಶ್ರೀನಿವಾಸ್ ಸಹಚರರು ಎನ್ನಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ಶೋಧಕಾರ್ಯಕ್ಕೆ ಆರು ತಂಡಗಳನ್ನು ರಚಿಸಿರುವುದಾಗಿ ಪೊಲೀಸ್ ಕಮಿಷನರ್ ವಿ.ಸತ್ಯನಾರಾಯಣ ಹೇಳಿದ್ದಾರೆ.
ಹಲ್ಲೆಕೋರ ನಡು ರಸ್ತೆಯಲ್ಲಿ ವಕೀಲ ದಂಪತಿ ಮೆಲೆ ಚಾಕುವಿನಿಂದ ಇರಿದಿದ್ದು, ಈತ ವೃತ್ತಿಪರ ಕೊಲೆಗಾರನೆಂಬ ಮಾಹಿತಿ ಕೂಡ ಲಭ್ಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕರೊನಾ ಸಮಯದಲ್ಲಿ ಬಡವರಿಗೆ ನೆರವು ನೀಡಿದ್ದ ಈ ದಂಪತಿಯ ಸಾವು ತುಂಬಾ ನೋವು ತಂದಿದೆ ಎಂದು ರಾಜ್ಯ ವಕೀಲರ ಸಂಘ ಸಂತಾಪ ವ್ಯಕ್ತಪಡಿಸಿದೆ. ಹತ್ಯೆಯ ಹಿಂದೆ ಟಿಆರ್ಎಸ್ ಸ್ಥಳೀಯ ನಾಯಕನ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.