ಬೆಳ್ತಂಗಡಿ : ವ್ಯಕ್ತಿಯೋರ್ವರಿಗೆ ಜಾಗದ ನೋಂದಣಿ ಮಾಡುವ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಓಣಿಯಾಲು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ನಿವಾಸಿ ಜಯಂತ್ ಗೌಡ (64) ಎಂಬವರು, ದಿನಾಂಕ:11-01-2024 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಓಣಿಯಾಲು ಎಂಬಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ವಿಶೇಷ ಗೌಡ, ವೈಶಾಕ್, ರಾಘವಗೌಡ, ಪ್ರದೀಪ ಎಂಬವರು ಜಯಂತ್ರನ್ನು ತಡೆದು ನಿಲ್ಲಿಸಿ, ಅವರುಗಳ ಪೈಕಿ ವಿಶೇಷ ಗೌಡನು ಜಾಗದ ನೋಂದಣಿ ಮಾಡುವ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿದಲ್ಲದೇ, ಮತ್ತೋರ್ವ ಆರೋಪಿ ರಾಘವ ಗೌಡನು ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುತ್ತಾನೆ.
ಈ ವೇಳೆ ಗಲಾಟೆ ಬಿಡಿಸಲು ಬಂದ ಶಶಾಂಕ್ ಎಂಬವರಿಗೆ ಆರೋಪಿ ಪ್ರದೀಪ್ ಎಂಬಾತನು ಅವಾಚ್ಯ ಶಬ್ದದಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿ ರಕ್ತಗಾಯಗೊಳಿಸಿರುತ್ತಾನೆ. ಗಲಾಟೆಯ ಬೊಬ್ಬೆ ಕೇಳಿ ಅಲ್ಲೆ ಸಮೀಪದಲ್ಲಿದ್ದ ದಯಾನಂದ ಹಾಗೂ ಬಾಸ್ಕರ ಗೌಡ ಮತ್ತು ಆನಂದ ಎಂಬವರು ಬರುವುದನ್ನು ನೋಡಿದ ಆರೋಪಿಗಳು ಜೀವ ಬೆದರಿಕೆ ಹಾಕಿ ಹಲ್ಲೆಗೆ ಬಳಸಿದ ಕಲ್ಲನ್ನು ಅಲ್ಲೇ ಬಿಸಾಡಿ ಹೋಗಿರುತ್ತಾರೆ. ಗಾಯಾಳುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 02/2024 ಕಲಂ: 341,324,504,506 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.